ಬೆಂಗಳೂರು: KPSC ಕರ್ನಾಟಕದ ನಿರುದ್ಯೋಗಿ ಯುವಜನರ ಪಾಲಿಗೆ ದುಃಸ್ವಪ್ನವಾಗಿದೆ. ಸರ್ಕಾರಿ ಹುದ್ದೆಗಳಿಗೆ ನಡೆಯುವ ಪ್ರತಿ ಪರೀಕ್ಷೆ ಹಾಗೂ ಆಯ್ಕೆ ಸಂದರ್ಭದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ KPSCಯ ಅವಿಭಾಜ್ಯ ಅಂಗವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರುದ್ಯೋಗಿಗಳ ಹಾಗೂ ವಿದ್ಯಾರ್ಥಿಗಳ ಪಾಲಿಗೆ ದೂರದ ಬೆಟ್ಟವಾಗಿರುವ KPSC ಯನ್ನು ಸರಿದಾರಿಗೆ ತರಲು ವಿದ್ಯಾರ್ಥಿಗಳು ಬೀದಿಗಿಳಿದಿರುವುದು ಅತ್ಯಂತ ಸ್ವಾಗತಾರ್ಹ ಕ್ರಮ. ಆದರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸರ ದಮನಕಾರಿ ವರ್ತನೆ ನಿಜಕ್ಕೂ ಹೇಯ ಹಾಗೂ ಖಂಡನೀಯ. ಪೊಲೀಸರ ವರ್ತನೆಗೆ ಕಾಂಗ್ರೆಸ್ ಪಕ್ಷದ ನೇರ ಕುಮ್ಮಕ್ಕು, ಪ್ರೇರಣೆ ಇದ್ದೇ ಇದೆ ಎನ್ನವುದು ಪೊಲೀಸರು ವಿದ್ಯಾರ್ಥಿಗಳೊಂದಿಗೆ ನಡೆದುಕೊಂಡ ರೀತಿಯಿಂದಲೇ ವೇದ್ಯವಾಗುತ್ತದೆ
ಎಂದಿದ್ದಾರೆ.
ತನ್ನ ಸರ್ಕಾರ ಇಲ್ಲದ ಕಡೆ ವಿದ್ಯಾರ್ಥಿಗಳನ್ನು ದೇಶವಿರೋಧಿ ಮನಸ್ಥಿತಿಗೆ ಪ್ರೇರೇಪಿಸುವ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ನಿರುದ್ಯೋಗಿಗಳ ಪಾಲಿಗೆ ಕಂಟಕಪ್ರಾಯವಾಗಿರುವ KPSC ವಿರುದ್ಧದ ಚಳುವಳಿಯಲ್ಲಿ ಬಂದು ಭಾಗವಹಿಸಲಿ, ಅದರ ವಿರುದ್ಧ ಧ್ವನಿಯೆತ್ತಲಿ. ಆಗ ಅವರು ನಿಜಕ್ಕೂ ಈ ದೇಶದ ಯುವ ಸಮೂಹದ ಪರ ಎಂದು ಒಪ್ಪಿಕೊಳ್ಳಬಹುದು. ಆದರೆ ಯುವಕರಿರಲಿ, ವಿದ್ಯಾರ್ಥಿಗಳಿರಲಿ, ಯಾರೇ ಇರಲಿ, ತನ್ನ ಸ್ವಾರ್ಥ ರಾಜಕಾರಣಕ್ಕೆ ಕಾಂಗ್ರೆಸ್ ಅವರನ್ನು ಈವರೆಗೂ ಬಳಸಿಕೊಂಡು ಬಂದಿರುವುದು ಇತಿಹಾಸದಲ್ಲಿ ದಾಖಲೆಯಾಗುತ್ತಾ ಬಂದಿದೆ. ಅದರ ಮುಂದುವರಿದ ಭಾಗವೇ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ದಿಕ್ಕು ತಪ್ಪಿದ CJP ಹೆಸರಿನ ಚಳುವಳಿಯಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ ಅತ್ಯಂತ ಅನಾಗರಿಕ ಹಾಗೂ ದೇಶದ ಹಿತಾಸಕ್ತಿಗೆ ಮಾರಕ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಪ್ರಶ್ನೆಪತ್ರಿಕೆ ಸಮಸ್ಯೆ ಉದ್ಭವಿಸಿಲ್ಲ. ಆದರೆ ನಿರುದ್ಯೋಗಿಗಳ ಪಾಲಿಗೆ ಸಂಜೀವಿನಿಯಾಗಬಲ್ಲ, ಬದುಕನ್ನು ರೂಪಿಸಬಲ್ಲ, ಉದ್ಯೋಗದಾತ ಸಂಸ್ಥೆಯಾಗಿರುವ ಲೋಕಸೇವಾ ಆಯೋಗ ಸಂಪೂರ್ಣವಾಗಿ ತುಕ್ಕು ಹಿಡಿದಿದೆ. ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ನಾತ ಗಬ್ಬೆದ್ದು ನಾರುತ್ತಿದೆ. ಇದರ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದಿರುವುದನ್ನು ಸಹಿಸದ ಕಾಂಗ್ರೆಸ್ ಸರ್ಕಾರದ ಇಬ್ಬಗೆಯ ನೀತಿಗೆ ಭವಿಷ್ಯತ್ತಿನಲ್ಲಿ ವಿದ್ಯಾರ್ಥಿಗಳೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.





Leave a comment