SUDDIKSHANA KANNADA NEWS/ DAVANAGERE/ DATE:20-09-2023
ದಾವಣಗೆರೆ: ಭದ್ರಾ ಡ್ಯಾಂ (Bhadra Dam)ನಿಂದ ಬಲದಂಡೆ ನಾಲೆಯಲ್ಲಿ ನೀರು ಸ್ಥಗಿತಗೊಳಿಸಿರುವುದರ ವಿರುದ್ಧ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿರುವ ಭಾರತ ರೈತ ಒಕ್ಕೂಟವು, ಹೆದ್ದಾರಿ ತಡೆ ಚಳವಳಿ, ಬೃಹತ್ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ನಿರ್ಧರಿಸಿದೆ. ಭದ್ರಾ ನೀರು ನಿಲುಗಡೆ ಮಾಡಿರುವುದನ್ನು ವಿರೋಧಿಸಿ ಇಂದು ನಡೆದ ರೈತರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಈ ಸುದ್ದಿಯನ್ನೂ ಓದಿ:
Davanagere: ಡಿ. ಎಲ್. ಮಾಡಿಸ್ಬೇಕಾ… ಡಿ. ಎಲ್. ಸ್ಲಾಟ್ ಓಪನ್.. ಇಂದಿನಿಂದ ನಿಮಗೆ ಮೂರು ತಿಂಗಳ ಕಾಲ ಅವಕಾಶ…!
ಸೆ. 21ರಂದು ಬೆಳಿಗ್ಗೆ 11 ಗಂಟೆಗೆ ಕುಂದುವಾಡದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ ಮಾಡುವುದು ಮತ್ತು ಸೆ. 22ರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ನಗರದ ಶ್ರೀ ಬೀರೇಶ್ವರ ದೇವಸ್ಥಾನದಿಂದ ಬೃಹತ್ ಟ್ರ್ಯಾಕ್ಟರ್ ಮೆರವಣಿಗೆ ಮಾಡಬೇಕು ಎಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಮಾತನಾಡಿ, ನಿರಂತರ 100 ದಿನ ನೀರು ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ ರೈತರು ಸುಮಾರು 1.5 ಲಕ್ಷ ಭತ್ತದ ನಾಟಿ ಮಾಡಿದ್ದಾರೆ. ನಿನ್ನೆ ಬೆಳಿಗ್ಗೆ 10 ಗಂಟೆಯಿಂದ ನೀರು ಹರಿವು ನಿಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ರೈತರ ಹಿತಾಸಕ್ತಿಯ ಕಾಳಜಿ ಇಲ್ಲ. ನಿನ್ನೆ ನಡೆದ ಐಸಿಸಿ ಸಭೆಯಲ್ಲಿ ಮೌನ ವಹಿಸಿದ್ದಾರೆ. ಇದು ಅವರ
ರೈತ ವಿರೋಧಿ ನಿಲುವು ಆಗಿದೆ ಎಂದು ಆರೋಪಿಸಿದರು.
ಬೆಳವನೂರು ನಾಗೇಶ್ವರರಾವ್ ರವರು ಮಾತನಾಡಿ, ರೈತರು ಸರ್ಕಾರದ ಆದೇಶ ನಂಬಿ ಸಾಲ ಸೋಲ ಮಾಡಿ ನಾಟಿ ಮಾಡಿದ್ದಾರೆ. ಈಗ ಏಕಾಏಕಿ ನೀರು ನಿಲ್ಲಿಸಿರುವುದರಿಂದ ರೈತರನ್ನು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಸಂಕಷ್ಟ ಹುಟ್ಟು ಹಬ್ಬ ಆಚರಣೆ ಸಂದರ್ಭದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರಿಗೆ ಚಿನ್ನಾಟವಾಗಿದೆ ಎಂದು ಹೇಳಿದರು.
ರೈತ ಮುಖಂಡ ಶಾಮನೂರು ಲಿಂಗರಾಜು ರವರು ಮಾತನಾಡಿ, ರೈತರು ಒಗ್ಗಟ್ಟಿನಿಂದ ನೀರಿಗಾಗಿ ಹೋರಾಟ ಮಾಡಬೇಕಾಗಿದೆ. ಇಲ್ಲವಾದರೆ ರೈತ ವಿರೋಧಿ ಸರ್ಕಾರಕ್ಕೆ ರೈತರ ಸಂಕಷ್ಟ ಅರ್ಥವಾಗುವುದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಆರನೇಕಲ್ಲು ವಿಜಯಕುಮಾರ, ಶಾಗಲೆ ಕ್ಯಾಂಪ್ ಬೋಗೇಶ್ವರರಾವ್, ಕುಂದುವಾಡದ ಜಿಮ್ಮಿ ಹನುಮಂತಪ್ಪ, ಎ. ಪ್ರಕಾಶ್, ಮಹೇಶಪ್ಪ, ಕಲ್ಲುಬಂಡೆ ಪ್ರಸಾದ್, ಕಲ್ಪನಹಳ್ಳಿ ಉಜ್ಜಣ್ಣ, ಶಾಮನೂರು ಕಲೇಶಪ್ಪ, ಸತ್ಯನಾರಾಯಣ ಕ್ಯಾಂಪ್ ನಾಗೇಶ್ವರರಾವ್, ಮತ್ತಿ ಜಯಣ್ಣ ಮತ್ತಿತರರು ಪಾಲ್ಗೊಂಡಿದ್ದರು.