ಬೆಂಗಳೂರು: ದಶಕಗಳ ಹಿಂದೆ ಕರ್ನಾಟಕದ ಅರಣ್ಯಗಳಿಂದ ಮರೆಯಾಗಿದ್ದ ಚೀತಾಗಳು ಈಗ ಮತ್ತೆ ರಾಜ್ಯಕ್ಕೆ ಮರಳಿವೆ. ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳು ಶನಿವಾರ ಮುಂಜಾನೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು (BBP) ತಲುಪಿವೆ.
ದಕ್ಷಿಣ ಆಫ್ರಿಕಾದ ಇಂಡುನಾ ಪ್ರೈಮೇಟ್ ಮತ್ತು ಪ್ಯಾರಟ್ ಪಾರ್ಕ್ನಿಂದ ತರಲಾದ ಈ ಚೀತಾಗಳಲ್ಲಿ ಎರಡು ಹೆಣ್ಣು ಚೀತಾಗಳಿವೆ. ಶನಿವಾರ ಮುಂಜಾನೆ ಸುಮಾರು 1.15 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇವುಗಳನ್ನು ತರಲಾಯಿತು. ವನ್ಯಜೀವಿ (ರಕ್ಷಣೆ) ಕಾಯಿದೆಯ ಅಡಿಯಲ್ಲಿ ಅನುಮೋದಿತ ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಈ ಪ್ರಕ್ರಿಯೆ ನಡೆದಿದೆ.
ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್ನಲ್ಲಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಈ ಚೀತಾಗಳನ್ನು ಬರಮಾಡಿಕೊಂಡರು. ಚೀತಾಗಳ ಆರೋಗ್ಯದ ದೃಷ್ಟಿಯಿಂದ ಮುಂದಿನ 30 ದಿನಗಳ ಕಾಲ ಅವುಗಳನ್ನು ಕಟ್ಟುನಿಟ್ಟಾದ ಕ್ವಾರಂಟೈನ್ನಲ್ಲಿ ಇಡಲಾಗುವುದು. ಈ ಅವಧಿಯಲ್ಲಿ ಪಶುವೈದ್ಯಕೀಯ ತಂಡವು ಅವುಗಳ ಆಹಾರ ಮತ್ತು ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲಿದೆ.
ಈ ಹಿಂದೆ ಕರ್ನಾಟಕದಲ್ಲಿ ‘ಶಿವಂಗಿ’ ಎಂದು ಕರೆಯಲ್ಪಡುತ್ತಿದ್ದ ಚೀತಾಗಳು ಈಗ ನಾಡಿಗೆ ಮರಳಿರುವುದು ಪರಿಸರ ಪ್ರೇಮಿಗಳಲ್ಲಿ ಸಂತಸ ತಂದಿದೆ. ವಂಶವಾಹಿ ವೈವಿಧ್ಯತೆ ಹೆಚ್ಚಿಸುವುದು ಮತ್ತು ಸಾರ್ವಜನಿಕರಲ್ಲಿ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.






Leave a comment