SUDDIKSHANA KANNADA NEWS/ DAVANAGERE/ DATE:30-11-2023
ದಾವಣಗೆರೆ: ಬ್ಯಾಂಕ್ ಗಳ ಎಟಿಎಂ ಭದ್ರತೆ ಸಂಬಂಧ ಎಲ್ಲಾ ಬ್ಯಾಂಕ್ ಗಳ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿನ ಎಟಿಎಂ ಗಳ ಭದ್ರತೆ ಸಂಬಂಧ ಸಭೆ ನಡೆಸಲಾಯಿತು.

ಎಲ್ಲಾ ಬ್ಯಾಂಕ್ ಗಳ ಮುಖ್ಯಸ್ಥರುಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಎಲ್ಲಾ ಎಟಿಎಂಗಳಲ್ಲಿ ಕಡ್ಡಾಯವಾಗಿ ಉತ್ತಮಗುಣ ಮಟ್ಟದ ಸಿಸಿಟಿವಿ ಹಾಕಬೇಕು. ಸೆಕ್ಯುರಿಟಿ ಗಾರ್ಡ್ ವ್ಯವಸ್ಥೆ ಮಾಡಬೇಕು. ಸಿಸಿಟಿವಿ ಒಳಗಡೆ ಹಾಕುವುದರ ಜೊತೆಗೆ ಎಟಿಎಂಗಳ ಹೊರಭಾಗದಲ್ಲಿ ಎಟಿಎಂಗಳಿಗೆ ಹಾಗೂ ಎಟಿಎಂ ಮುಂದೆ ಸಂಚರಿಸುವವರು ಕಾಣುವಂತೆ ಸಿಸಿಟಿವಿಗಳನ್ನು ಅಳವಡಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.
ಬ್ಯಾಂಕ್ ಗಳಲ್ಲಿ ಒಳಗಡೆ ಹೊರಗಡೆ ಸಿಸಿಟಿವಿ ವ್ಯವಸ್ಥೆ ಮಾಡಬೇಕು. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುತ್ತಿರಬೇಕು. ಬ್ಯಾಂಕ್ ಗಳಲ್ಲಿ ಅಲರಾಂ (ಎಚ್ಚರಿಕೆ ಘಂಟೆ) ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುತ್ತಿರಬೇಕು. ಬ್ಯಾಂಕುಗಳಿಗೆ ಬರುವ ಸಾರ್ವಜನಿಕರಲ್ಲಿ ಅನುಮಾನಸ್ಪದ ವ್ಯಕ್ತಿಗಳು ಯಾರಾದರೂ ಕಂಡು ಬಂದರೆ ಕೂಡಲೇ ಅವರ ಮೇಲೆ ನಿಗಾ ವಹಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಬ್ಯಾಂಕ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ಸಂಪರ್ಕದಲ್ಲಿರಬೇಕು. ಬ್ಯಾಂಕ್ ಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಅವಶ್ಯಕ ಸಹಕಾರ ನೀಡಬೇಕು.
ಬ್ಯಾಂಕ್ ಗಳಿಗೆ ಬರುವ ಹಿರಿಯ ನಾಗರೀಕರಿಗೆ ಹಾಗೂ ಹಣ ತೆಗೆದುಕೊಂಡು ಹೋಗುವ ಗ್ರಾಹಕರಿಗೆ ಗಮನ ಬೇರೆ ಸೆಳೆದು (Attention Diversion) ಹಣ ಲಪಟಾಯಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರಿಗೆ ಹಣದ ಭಧ್ರತೆ ಬಗ್ಗೆ ಸೂಕ್ತ ತಿಳುವಳಿಕೆ
ನೀಡಬೇಕು. ಬ್ಯಾಂಕ್ ಗಳ ಒಳಗಡೆ ಹೊರಗಡೆ ಗಾರ್ಡ್ ವ್ಯವಸ್ಥೆ ಮಾಡಬೇಕು.
ಎಲ್ಲಾ ಬ್ಯಾಂಕ್ ಗಳು ತಮ್ಮ ತಮ್ಮ ಬ್ಯಾಂಕ್ ಚೆಸ್ಟ್ ಗಳು ಇರುವಲ್ಲಿ ಸೂಕ್ತ ಭಧ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಒಳಗೂ ಹಾಗೂ ಹೊರಗೂ ಉತ್ತಮ ಗುಣ ಮಟ್ಟದ ಸಿಸಿಟಿವಿ ವ್ಯವಸ್ಥೆ ಮಾಡಲೇಬೇಕು. 24*7 ಗಾರ್ಡ್ ವ್ಯವಸ್ಥೆ, ಬ್ಯಾಕ್ ಚೆಸ್ಟ್ ಸುತ್ತ
ಭಧ್ರತಾ ವ್ಯವಸ್ಥೆ ಮಾಡಬೇಕು.
ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬ್ಯಾಂಕ್ ಗಳು ಸಾರ್ವಜನಿಕರಿಗೆ ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸೈಬರ್ ವಂಚನೆ ಪ್ರಕರಣಗಳ ತನಿಖೆ ಸಮಯದಲ್ಲಿ ಪೊಲೀಸರಿಗೆ ವಿಳಂಬ ಮಾಡದೇ
ಸಹಕರಿಸಬೇಕು. ಸೈಬರ್ ವಂಚನೆ ಪ್ರಕರಣಗಳಲ್ಲಿ ನೊಂದ ವ್ಯಕ್ತಿಗಳಿಗೆ ಅಲೆದಾಡಿಸದೇ ಅವರಿಗೆ ಕೂಡಲೇ ಅವಶ್ಯಕ ಸಹಾಯ ಮಾಡುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಸೂಚನೆ ನೀಡಿದರು.
ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೈಬರ್ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಸೈಬರ್ ವಂಚನೆ ಪ್ರಕರಣಗಳಿಗೆ ಸಾರ್ವಜನಿಕರು ಬಲಿಯಾಗದಂತೆ ಜಾಗೃತಿ ಮೂಡಿಸಬೇಕು. ಸೈಬರ್ ವಂಚನೆ ಪ್ರಕರಣಗಳಿಗೆ ಒಳಗಾದ ಸಾರ್ವಜನಿಕರಿಗೆ ಅವಶ್ಯಕ ನೆರವು ನೀಡುವುದು ಹಾಗೂ ಸದರಿ ಪ್ರಕರಣಗಳ ತನಿಖೆಗೆ ದಾಖಲೆಗಳು ಸೇರಿದಂತೆ ಅವಶ್ಯಕ ಸಹಕಾರ ನೀಡುವ ಬಗ್ಗೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಪಕ ಪ್ರಕಾಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ ಎಂ. ಸಂತೋಷ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಬಿ ಎಸ್, ಪೊಲೀಸ್ ನಿರೀಕ್ಷಕರಾದ ಗುರುಬಸವರಾಜ, ಇಮ್ರಾನ್ ಬೇಗ್, ಸುರೇಶ್ ಸಗರಿ, ಪಿ. ಪ್ರಸಾದ್, ರುದ್ರಪ್ಪ ಎಲ್.,ಕಿರಣ್ ಕುಮಾರ್, ಮಲ್ಲಮ್ಮ ಚೌಬೆ ಅವರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಕೆನರಾ ಬ್ಯಾಂಕ್, ಎಸ್ ಬಿ ಐ ಬ್ಯಾಂಕ್ ಗಳ ವ್ಯವಸ್ಥಾಪಕರು ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.