ಮುಂಬೈ: ಮಹಿಳಾ ಗೆಳತಿಯೊಂದಿಗೆ ರಹಸ್ಯ ಪ್ರವಾಸ ಕೈಗೊಳ್ಳಲು ಹೋಗಿ, ಅದನ್ನು ಮುಚ್ಚಿಡಲು ಇಮಿಗ್ರೇಷನ್ ಅಧಿಕಾರಿಗಳ ನೆಪ ಹೇಳಿ ಕೊನೆಗೆ ಪತಿಯೇ ಅಪಹರಣಕ್ಕೊಳಗಾಗಿದ್ದಾನೆ ಎಂದು ಪತ್ನಿ ಪೊಲೀಸರ ಮೆಟ್ಟಿಲೇರಿದ ವಿಚಿತ್ರ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಪುಣೆಯಲ್ಲಿ ಲಾಂಡ್ರಿ ಉದ್ಯಮ ನಡೆಸುತ್ತಿರುವ 46 ವರ್ಷದ ಉದ್ಯಮಿಯೊಬ್ಬ ಸೆಪ್ಟೆಂಬರ್ 14ರಂದು ಉದ್ಯಮದ ಕೆಲಸದ ಮೇರೆಗೆ ಮಲೇಷ್ಯಾದ ಕೌಲಾಲಂಪುರ್ಗೆ ಹೋಗುತ್ತಿರುವುದಾಗಿ ಮನೆಯಲ್ಲಿ ತಿಳಿಸಿದ್ದ.
ಆದರೆ, ಆತ ತನ್ನ ಮಹಿಳಾ ಗೆಳತಿಯೊಂದಿಗೆ ಪ್ರವಾಸಕ್ಕೆ ಯೋಜನೆ ರೂಪಿಸಿದ್ದ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದಾಗ, ಆತನ ಗೆಳತಿ ಹಳೆಯ ಹಾಗೂ ಕಳೆದುಹೋಗಿದೆ ಎಂದು ಹಿಂದೆ ವರದಿ ಮಾಡಿದ್ದ ಪಾಸ್ಪೋರ್ಟ್ ಬಳಸಿ ಪ್ರಯಾಣಿಸಲುತ್ನಿಸಿದ್ದು ಕಂಡುಬಂತು. ಇದರಿಂದ ಇಮಿಗ್ರೇಷನ್ ಅಧಿಕಾರಿಗಳು ಆಕೆಯನ್ನು ತಡೆದರು.
ಗೆಳತಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಉದ್ಯಮಿ ತನ್ನ ಪ್ರವಾಸವನ್ನು ರದ್ದುಗೊಳಿಸಿದ. ಆದರೆ ತನ್ನ ರಹಸ್ಯ ಪ್ರವಾಸದ ವಿಷಯ ಪತ್ನಿಗೆ ತಿಳಿಯಬಹುದೆಂಬ ಭಯದಿಂದ, ಇಮಿಗ್ರೇಷನ್ ಸಮಸ್ಯೆಯಿಂದಾಗಿ ಮೊಬೈಲ್ ಫೋನ್ ಅನ್ನು ಅಧಿಕಾರಿಗಳಿಗೆ ಒಪ್ಪಿಸಬೇಕಾಯಿತು ಎಂದು ಲ್ಯಾಂಡ್ಲೈನ್ ಮೂಲಕ ಪತ್ನಿಗೆ ಸುಳ್ಳು ಮಾಹಿತಿ ನೀಡಿದ್ದ
ಮರುದಿನ ವಾಟ್ಸಾಪ್ ವಿಡಿಯೋ ಕಾಲ್ನಲ್ಲೂ ಇದೇ ಸುಳ್ಳನ್ನು ಪುನರಾವರ್ತಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಪತಿಯ ಫೋನ್ ಸಂಪರ್ಕಕ್ಕೆ ಸಿಗದಿದ್ದಾಗ ಗಾಬರಿಗೊಂಡ ಪತ್ನಿ, ಆತ ಅಪಹರಣಕ್ಕೊಳಗಾಗಿದ್ದಾನೆ ಎಂದು ಮುಂಬೈನ ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಿದ್ದಂತೆ ವಿಷಯ ತಿಳಿದ ಉದ್ಯಮಿ ಸ್ವತಃ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ನಾಟಕವನ್ನು ಒಪ್ಪಿಕೊಂಡಿದ್ದಾನೆ. ಪತ್ನಿಯು ಸತ್ಯ ತಿಳಿಯದೆ ತಪ್ಪಾಗಿ ನೀಡಿದ ದೂರು ಇದಾಗಿದ್ದರಿಂದ, ಪೊಲೀಸರು ನ್ಯಾಯಾಲಯಕ್ಕೆ ‘ಸಿ ಸಮ್ಮರಿ’ ಮುಕ್ತಾಯ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.





Leave a comment