ರಾಜಸ್ಥಾನ: ಅಲ್ವಾರ್ ಜಿಲ್ಲೆಯ ಅರಾವಳಿ ವಿಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 12 ರ ರಾತ್ರಿ ನಡೆದ ದಾರುಣ ಘಟನೆಯಲ್ಲಿ ಮೂವರು ಯುವಕರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಘಟನೆ ನಡೆದ 48 ಗಂಟೆಗಳ ಒಳಗಾಗಿ ಪ್ರಮುಖ ಆರೋಪಿ ಸಚಿನ್ ಮೀನಾ ಸೇರಿದಂತೆ ಐವರು ಪ್ರೌಢರನ್ನು ಪೊಲೀಸರು ಬಂಧಿಸಿದ್ದು, ಓರ್ವ ಅಪ್ರಾಪ್ತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಹೇಗೆ ನಡೆಯಿತು?
ಮೃತ ಯುವಕರಾದ ಜಿತೇಂದ್ರ ಅಲಿಯಾಸ್ ಛೋಟು ರಜಪೂತ್ (೨೨), ಯುವರಾಜ್ ಅಲಿಯಾಸ್ ಯುವಿ ಸೈನಿ (೨೧) ಮತ್ತು ಹಿಮಾಂಶು ಶರ್ಮಾ (೨೨) ಅವರು ಒಂದೇ ಪ್ರದೇಶದ ಬಾಲ್ಯದ ಸ್ನೇಹಿತರಾಗಿದ್ದರು. ಸೆಪ್ಟೆಂಬರ್ ೧೨ ರ ರಾತ್ರಿ ಸುಮಾರು ೧೦ ಗಂಟೆಗೆ ಮೂವರೂ ಒಂದೇ ಬೈಕ್ನಲ್ಲಿ ಕಾಳಿ ಮೋರಿ ಭಾಗದಲ್ಲಿ ಚಲಿಸುತ್ತಿದ್ದರು. ಈ ವೇಳೆ ಸ್ವಿಫ್ಟ್ ಕಾರು ಹಾಗೂ ಎರಡು ಬೈಕ್ಗಳಲ್ಲಿ ಬಂದ ಆರೋಪಿಗಳು, ಯುವಕರ ಬೈಕ್ಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಯುವಕರು ಕೆಳಗೆ ಬಿದ್ದಾಗ, ಕಾರನ್ನು ಮುಂದೆ ಮತ್ತು ಹಿಂದೆ ಚಲಾಯಿಸಿ ಯುವಕರ ಮೇಲೆ ಹಲವು ಬಾರಿ ಹರಿಸಲಾಗಿದೆ. ಅಷ್ಟಕ್ಕೇ ನಿಲ್ಲಿಸದ ಆರೋಪಿಗಳು ಕೆಳಗೆ ಬಿದ್ದಿದ್ದ ಯುವಕರ ಮೇಲೆ ಕಬ್ಬಿಣದ ರಾಡ್ಗಳು, ಕೋಲುಗಳು, ಚಾಕು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆಗೆ ಪ್ರೇಮ ವಿವಾದವೇ ಮೂಲ ಕಾರಣ:
ಪೊಲೀಸ್ ತನಿಖೆಯ ಪ್ರಕಾರ, ಪ್ರಮುಖ ಆರೋಪಿ ಸಚಿನ್ ಮೀನಾ ಹಾಗೂ ಮೃತ ಯುವಕರಲ್ಲಿ ಒಬ್ಬನ ತಂಗಿಯ ನಡುವೆ ಪ್ರೇಮ ಸಂಬಂಧವಿತ್ತು. ಆದರೆ ಯುವತಿಯ ಕುಟುಂಬದವರು ಆಕೆಗೆ ಬೇರೊಂದೆಡೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಸಚಿನ್, ವಧುವಿನ ಕಡೆಯವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದನು. ಈ ವಿಷಯ ತಿಳಿದು ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ಸಚಿನ್ ಮೇಲೆ ಹಲ್ಲೆ ನಡೆಸಿದ್ದರು. ಈ ಹಳೆಯ ದ್ವೇಷ ಹಾಗೂ ಸೇಡು ತೀರಿಸಿಕೊಳ್ಳಲು ಸಚಿನ್ ತನ್ನ ಸಹಚರರೊಂದಿಗೆ ಸೇರಿ ಪಕ್ಕಾ ಪ್ಲಾನ್ ಮಾಡಿ ಈ ತ್ರಿವಳಿ ಕೊಲೆ ಎಸಗಿದ್ದಾನೆ.
ಬಂಧಿತರು ಹಾಗೂ ಪೊಲೀಸ್ ಕ್ರಮ:
ಬಂಧಿತ ಆರೋಪಿಗಳನ್ನು ಸಚಿನ್ ಮೀನಾ, ಸಾಗರ್ ಮೀನಾ, ಅಮಿತ್ ಅಲಿಯಾಸ್ ಪಲ್ಟಾ, ಮಹೇಶ್ ಸೈನಿ ಮತ್ತು ತನ್ಮಯ್ ಅಲಿಯಾಸ್ ತನ್ನು ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಸೈಬರ್ ಸೆಲ್ ಸಹಾಯದಿಂದ ಆರೋಪಿಗಳನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ನಗರದಲ್ಲಿ ಅವರ ಮೆರವಣಿಗೆ ನಡೆಸಿದ್ದಾರೆ. ಪ್ರಕರಣದ ಶೀಘ್ರ ತನಿಖೆ ನಡೆಸಿ ಕಠಿಣ ಶಿಕ್ಷೆ ಕೊಡಿಸಲು ಪೊಲೀಸರು ವಿಶೇಷ ತನಿಖಾ ಯೋಜನೆ ಕೈಗೆತ್ತಿಕೊಂಡಿದ್ದಾರೆ.





Leave a comment