ಝಾನ್ಸಿ (ಉತ್ತರ ಪ್ರದೇಶ): ಅನೈತಿಕ ಸಂಬಂಧದ ವಿಷಯ ಅಜ್ಜನಿಗೆ ತಿಳಿದು ಎಲ್ಲಿ ಸಮಾಜದಲ್ಲಿ ಮಾನ ಹರಿಯುತ್ತದೋ ಎಂಬ ಭಯದಿಂದ, ಸ್ವಂತ ಮೊಮ್ಮಗಳೇ ತನ್ನ ಪ್ರೇಮಿಯೊಂದಿಗೆ ಸೇರಿ ಅಜ್ಜನನ್ನು ಕ್ರೂರವಾಗಿ ಕೊಲೆ ಮಾಡಿ ಬಾವಿಗೆ ಎಸೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಚಿರಾಂಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಛಿರೋನಾ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು ರಾಮ್ದೀನ್ ಕುಶ್ವಾಹಾ (65) ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಮೊಮ್ಮಗಳು ಕಾಂಚನ್ ಹಾಗೂ ಆಕೆಯ ಪ್ರೇಮಿ ವಿಶಾಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಸೆಪ್ಟೆಂಬರ್ 12 ರಂದು ರಾಮ್ದೀನ್ ಅವರು ಕೆಲಸ ಮುಗಿಸಿ ಮನೆಗೆ ಬಂದಾಗ, ಮೊಮ್ಮಗಳು ಕಾಂಚನ್ ಹಾಗೂ ನೆರೆಮನೆಯ ವಿಶಾಲ್ ಮಂಚದ (ಚಾರ್ಪಾಯ್) ಮೇಲೆ ಒಟ್ಟಿಗೆ ಕುಳಿತಿರುವುದನ್ನು ನೋಡಿದ್ದಾರೆ. ಇದನ್ನು ಕಂಡು ಅಜ್ಜ ಆಕ್ರೋಶ ವ್ಯಕ್ತಪಡಿಸಿದಾಗ, ವಿಷಯ ಹೊರಬಂದು ಕುಟುಂಬದ ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ಇಬ್ಬರೂ ಅಜ್ಜನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ.
ವಿಶಾಲ್ ಅಜ್ಜನ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿದರೆ, ಮೊಮ್ಮಗಳು ಕಾಂಚನ್ ರೊಟ್ಟಿ ಮಾಡಲು ಬಳಸುವ ಕಲ್ಲಿನಿಂದ ಅಜ್ಜನ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜ್ಜನ ಮೃತದೇಹವನ್ನು ಇಬ್ಬರೂ ಸೇರಿ ಮನೆಯ ಹಿಂಭಾಗದಲ್ಲಿದ್ದ ಬಾವಿಗೆ ಎಸೆದು ಪರಾರಿಯಾಗಿದ್ದರು.
ಅಪಘಾತವೆಂದು ನಂಬಿ ಅಂತ್ಯಸಂಸ್ಕಾರ ನೆರವೇರಿಸಿದ್ದ ಕುಟುಂಬ:
ಘಟನೆ ನಡೆದ ದಿನ ಸಂಜೆ ರಾಮ್ದೀನ್ ಹೆಂಡತಿ ಮನೆಗೆ ಬಂದಾಗ ಗಂಡ ಕಾಣೆಯಾಗಿದ್ದರು. ಮೊಮ್ಮಗಳನ್ನು ಕೇಳಿದಾಗ ತನಗೆ ತಿಳಿಯದೆಂದು ಹೇಳಿದ್ದಳು. ಮಾರನೇ ದಿನ ಬೆಳಿಗ್ಗೆ ಆಕೆಯೇ “ಅಜ್ಜ ಬಾವಿಯತ್ತ ಹೋಗಿದ್ದರು” ಎಂದು ಸುಳ್ಳು ಕಥೆ ಕಟ್ಟಿದ್ದಳು. ಬಾವಿಯಲ್ಲಿ ಮೃತದೇಹ ಸಿಕ್ಕಾಗ, ರಾಮ್ದೀನ್ ಕುಡಿಯುವ ಅಭ್ಯಾಸ ಹೊಂದಿದ್ದರಿಂದ ಕುಡಿದು ಬಾವಿಗೆ ಬಿದ್ದಿರಬಹುದು ಎಂದು ಭಾವಿಸಿ, ಕುಟುಂಬಸ್ಥರು ಪೊಲೀಸರಿಗೆ ದೂರು ನೀಡದೆ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ರಕ್ತದ ಕಲೆ ಹತ್ತಿದ್ದ ಬಟ್ಟೆಯಿಂದ ಹೊರಬಂತು ಕೊಲೆಯ ರಹಸ್ಯ:
ಅಂತ್ಯಸಂಸ್ಕಾರ ಮುಗಿದ ನಂತರ ಮನೆಯನ್ನು ಸ್ವಚ್ಛಗೊಳಿಸುವಾಗ ಕಾಂಚನ್ನ ರಕ್ತದ ಕಲೆಯಾಗಿದ್ದ ಬಟ್ಟೆಗಳು ಕುಟುಂಬಸ್ಥರಿಗೆ ಸಿಕ್ಕಿವೆ. ಇದನ್ನು ಕಂಡು ಅನುಮಾನಗೊಂಡ ಸಂಬಂಧಿಕರು ಕಾಂಚನ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆಕೆ ಕೊಲೆಯಾಗಿದ್ದ ನಿಜಾಂಶವನ್ನು ಬಾಯ್ಬಿಟ್ಟಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಝಾನ್ಸಿ ಗ್ರಾಮಾಂತರ ಎಸ್ಪಿ ಅರವಿಂದ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ, ಕೊಲೆಗೆ ಬಳಸಿದ್ದ ಕಲ್ಲನ್ನು ವಶಪಡಿಸಿಕೊಂಡಿದ್ದಾರೆ.
Leave a comment