ದಾವಣಗೆರೆ: ರಾಜ್ಯ ರಾಜಧಾನಿಯಷ್ಟೇ ಅಲ್ಲದೆ ಜಿಲ್ಲಾ ರಾಜಕೀಯದಲ್ಲೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ದುಗ್ಗತ್ತಿ ಫ್ಯಾಕ್ಟರಿ ವಿಚಾರ ಮತ್ತು ರೈತರ ಜಮೀನು ಕಬಳಿಕೆ ಕುರಿತು ಬಹಿರಂಗವಾಗಿ ವಾಗ್ದಾಳಿ ನಡೆಸಿರುವ ಶಾಸಕ ಬಿ. ಪಿ. ಹರೀಶ್, ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಭ್ರಷ್ಟಾಚಾರದ ಹಣದ ಭ್ರಮೆಯಲ್ಲಿರುವ ಅವರು, ಯಾರಿಗೆ ಬೇಕಾದರೂ ಏಕವಚನದಲ್ಲಿ ಮಾತನಾಡುತ್ತಾರೆ. ನಮಗೆ ಬೂಟಲ್ಲಿ ಹೊಡೆಯುವುದಾಗಿ ಹೇಳುವವರ ಅಪ್ಪ ಹುಟ್ಟಿಬಂದರೂ ನಮ್ಮ ಕುಟುಂಬಕ್ಕೆ ಏನೂ ಮಾಡಲು ಆಗಲ್ಲ” ಎಂದು ಬಿ.ಪಿ. ಹರೀಶ್ ಗುಡುಗಿದ್ದಾರೆ. ತಮಗೆ 43 ವರ್ಷಗಳ ರಾಜಕೀಯ ಅನುಭವವಿದ್ದು, ಬಡವರು ಹಾಗೂ ರೈತರ ಆಶೀರ್ವಾದ ಇರುವವರೆಗೆ ತಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.
ದಾವಣಗೆರೆ ರಾಜಕೀಯ ವಲಯದಲ್ಲಿ ಬದ್ಧವೈರಿಗಳಂತೆ ಕಿತ್ತಾಡಿಕೊಳ್ಳುತ್ತಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಸಕ ಬಿ.ಪಿ. ಹರೀಶ್ ನಡುವಿನ ತಿಕ್ಕಾಟ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ದುಗ್ಗತ್ತಿ ಫ್ಯಾಕ್ಟರಿ ಪ್ರಕರಣ ಹಾಗೂ ರೈತರ ಜಮೀನು ಕಬಳಿಕೆಯಂತಹ ಗಂಭೀರ ಆರೋಪಗಳ ಸತ್ಯಾಂಶ ಹೊರಬಂದರೂ ಜಿಲ್ಲಾಡಳಿತ ಮತ್ತು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹರೀಶ್ ಆರೋಪಿಸಿದ್ದಾರೆ.
ತಮ್ಮ ಮೇಲಿನ ರಾಜಕೀಯ ದಾಳಿಗಳಿಗೆ ಮತ್ತು ಭ್ರಷ್ಟಾಚಾರದ ಬಯಲು ಎಳೆಯುವ ಯತ್ನಗಳಿಗೆ ಪ್ರತಿಕ್ರಿಯಿಸಿರುವ ಹರೀಶ್, ವಿರೋಧಿಗಳ ಸಂಸ್ಕಾರ ಹೀನ ರಾಜಕಾರಣವನ್ನು ಕಟುವಾಗಿ ಟೀಕಿಸಿದ್ದಾರೆ. 22ನೇ ವಯಸ್ಸಿನಲ್ಲೇ ನಗರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ತಾವು, ದಶಕಗಳ ಕಾಲ ಜನಪರ ಹೋರಾಟಗಳ ಮೂಲಕವೇ ಬೆಳೆದುಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೃಷಿ ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರ ಪ್ರೀತಿ-ವಿಶ್ವಾಸವಿರುವವರೆಗೆ ದುಷ್ಟಶಕ್ತಿಗಳ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.





Leave a comment