ದಾವಣಗೆರೆ: ಭದ್ರಾ ಡ್ಯಾಂನಿಂದ ನೀರು ಹರಿಸಬೇಕೆಂದು ಒತ್ತಾಯಿಸುವ ಸಂಬಂಧ ಚರ್ಚಿಸಲು ಆಗಸ್ಟ್ 22ರ ನಾಳೆ ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ನಗರದ ಹಳೇ ಪ್ರವಾಸಿ ಮಂದಿರದಲ್ಲಿ ರೈತರ ಸಮಾಲೋಚನೆ ಸಭೆ ಕರೆಯಲಾಗಿದೆ.
ದಾವಣಗೆರೆ: ಇಂದು ಭದ್ರಾ ಜಲಾಶಯಕ್ಕೆ ಬರುವ ಒಳಹರಿವು ನೀರಿನ ಪ್ರಮಾಣ 3457 ಕ್ಯೂಸೆಕ್ ಇದ್ದು, ನೀರಿನ ಮಟ್ಟ 174 ಅಡಿ 7 ಇಂಚು ಇದೆ. ಒಟ್ಟು ನೀರಿನ ಸಂಗ್ರಹ 57.91 ಟಿಎಂಸಿ ಇದೆ. ಇದರಲ್ಲಿ ಡೆಡ್ ಸ್ಟೋರೇಜ್ 13.8 ಟಿಎಂಸಿ, ಕುಡಿಯುವ ನೀರಿಗಾಗಿ 8.5 ಟಿಎಂಸಿ, ಸೋರಿಕೆ ಸೇರಿದಂತೆ ಅವಿಯಾಗುವುದು 6 ಟಿಎಂಸಿ ಮತ್ತು ಈ ವರ್ಷ ಎಲ್ ನೀನೋ ಎಫೆಕ್ಟ್ ನಿಂದಾಗಿ 2 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಮೀಸಲಿಡಬೇಕು ಎಂದು ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳ ಜಲಾಶಯಗಳ ಪ್ರಾಧಿಕಾರಗಳಿಗೆ ಪತ್ರ ಬರೆದು ಆದೇಶಿಸಿದೆ.
ಹೀಗಾಗಿ 27.61 ಟಿಎಂಸಿ ನೀರು ಮಾತ್ರ ಬಳಕೆಗೆ ಉಳಿಯುತ್ತದೆ. ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ 120 ದಿನ ಸತತವಾಗಿ ನೀರು ಹರಿಸಲು ಮಳೆಗಾಲದ ಹಂಗಾಮಿನಲ್ಲಿ 32 ಟಿಎಂಸಿ ಮತ್ತು ಬೇಸಿಗೆ ಹಂಗಾಮಿನಲ್ಲಿ 35 ಟಿಎಂಸಿ ನೀರು ಸಂಗ್ರಹ ಬೇಕಾಗುತ್ತದೆ. ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಹಂಗಾಮಿನಲ್ಲಿ 1 ಲಕ್ಷದ 60 ಸಾವಿರ ಎಕರೆ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗುತ್ತದೆ.
ಈ ಹಂಗಾಮಿನಲ್ಲಿ 16 ಸಾವಿರ ಎಕರೆ ಪ್ರದೇಶದಲ್ಲಿ ಭತ್ತದ ಬೀಜ ಚೆಲ್ಲಿ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು 14 ಸಾವಿರ ಎಕರೆ ಪ್ರದೇಶದಲ್ಲಿ ಭತ್ತದ ಬೀಜ ಬಿತ್ತನೆ ಮಾಡಲಾಗಿದೆ. ಅಂದ್ರೆ ಸುಮಾರು ಶೇಕಡ 18.75 ರಷ್ಟು ಭತ್ತದ ನಾಟಿಗೆ ಸಿದ್ಧತೆ ನಡೆದಿದೆ. ಡ್ಯಾಂ ನೀರು ಬಂದ ನಂತರ ಭತ್ತದ ಬೀಜ ಚೆಲ್ಲುವವರಿದ್ದಾರೆ. ಇವರೆಲ್ಲರಿಗೂ ಭತ್ತದ ಬೆಳೆ ಕೊಯ್ಲು ಆಗುವವರೆಗೆ ನೀರು ಬೇಕು. ಮುಂದಾಲೋಚನೆ ಇಲ್ಲದೇ ನೀರು ಬೇಕಾಬಿಟ್ಟಿ ಬಳಸಿದ್ರೆ ಮುಂದಿನ ಬೇಸಿಗೆ ಹಂಗಾಮಿನಲ್ಲಿ ನೀರು ಇಲ್ಲದಂತಾಗಿ ಬೆಳೆದ ತೋಟಗಳು ವಿನಾಶದ ಅಂಚಿಗೆ ಹೋಗುವ ಸಂಭವ ಇದೆ. ಹೀಗಾಗಿ ರೈತರು ಎಚ್ಚರಿಕೆಯ ನಡೆ ಇಡಬೇಕಾಗಿದೆ.
ಆದ್ದರಿಂದ ನಾಳಿನ ಸಭೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೋಳೆನಹಳ್ಳಿ ಬಿ ಎಂ ಸತೀಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಬಲೇಶ್ವರಗೌಡ್ರು, ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬೇತೂರು ಸಂಗಣ್ಣಗೌಡ್ರು, ಮಾಜಿ ಎಪಿಎಂಸಿ ಅಧ್ಯಕ್ಷ ಬೇತೂರು ಪ್ರಭು, ಬೇತೂರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷಪ್ಪ, ಗೋಪನಾಳ್ ಎಸ್.ಆರ್.ರಾಜೇಂದ್ರ, ಗೋಣಿವಾಡ ಎನ್.ಎಂ.ಮಂಜುನಾಥ, ಕೆ.ಆರ್.ಶಿವಕುಮಾರ, ಶಾಗಲೆ ತಿಪ್ಪೇಸ್ವಾಮಿ, ಕಂದಗಲ್ ರೇವಣ್ಣ ಮುಂತಾದವರು ಮನವಿ ಮಾಡಿದ್ದಾರೆ.





Leave a comment