Home ಕ್ರೈಂ ನ್ಯೂಸ್ ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಡೂಪ್ಲಿಕೇಟ್ ಕೀ ಬಳಸಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳ ಕಳ್ಳತನ ಮಾಡ್ತಿದ್ದ ಮಹಿಳೆ ಸೇರಿ ಇಬ್ಬರು ಖದೀಮರ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಡೂಪ್ಲಿಕೇಟ್ ಕೀ ಬಳಸಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳ ಕಳ್ಳತನ ಮಾಡ್ತಿದ್ದ ಮಹಿಳೆ ಸೇರಿ ಇಬ್ಬರು ಖದೀಮರ ಬಂಧನ!

Share
ಬೆಂಗಳೂರು
Share

ಬೆಂಗಳೂರು: ನಕಲಿ (ಡುಪ್ಲಿಕೇಟ್) ಕೀ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಐಷಾರಾಮಿ ಕಾರುಗಳನ್ನು ಕದ್ದು, ಅವುಗಳನ್ನು ರಾಜಸ್ಥಾನದಲ್ಲಿ ಮಾರಾಟ ಮಾಡುತ್ತಿದ್ದ ಖದೀಮರ ಜಾಲವನ್ನು ಬೆಂಗಳೂರು ನಗರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ರಾಜಸ್ಥಾನದ ಬಾರ್ಮರ್‌ನಲ್ಲಿ ಕದ್ದು ಬಾಂಧಿದ್ದ 35 ಲಕ್ಷ ರೂಪಾಯಿ ಮೌಲ್ಯದ ಟೊಯೋಟಾ ಫಾರ್ಚೂನರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ:

ಕಳೆದ ಜೂನ್ 27ರಂದು ತಮಿಳುನಾಡಿನ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನ ಸಿಂಗಸಂದ್ರದಲ್ಲಿರುವ ಹೋಟೆಲ್ ಒಂದರ ಪಾರ್ಕಿಂಗ್ ಪ್ರದೇಶದಲ್ಲಿ ತಮ್ಮ ಟೊಯೋಟಾ ಫಾರ್ಚೂನರ್ ಕಾರನ್ನು પાર્ಕ್ ಮಾಡಿದ್ದರು. ಜೂನ್ 26ರಂದು ವಾರಾಂತ್ಯದ ಪ್ರವಾಸಕ್ಕಾಗಿ ನಗರಕ್ಕೆ ಬಂದಿದ್ದ ಅವರು, ತಡರಾತ್ರಿ ಸಿನಿಮಾ ಮುಗಿಸಿ ಬಂದು ಕಾರನ್ನು ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದರು. ಆದರೆ ಮರುದಿನ ಬೆಳಿಗ್ಗೆ ಕಾರು ಕಾಣೆಯಾಗಿದ್ದು, ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಖೆಡ್ಡಾಗೆ ಬಿದ್ದ ಆರೋಪಿಗಳು:

ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ, ಜುಲೈ 4 ರಂದು ಬೆಳಗಾವಿ-ಪುಣೆ ರಾಷ್ಟ್ರೀಯ ಹೆದ್ದಾರಿಯ ಕರಾಡ್ ಬಳಿ ಆರೋಪಿಗಳ ಸುಳಿವು ಪಡೆದರು. ಕಾರ್ಯಾಚರಣೆ ವೇಳೆ ಮುಖ್ಯ ಆರೋಪಿ ಕಾರಿನೊಂದಿಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರೂ, ಆತನ ಜೊತೆಗಿದ್ದ ಮಹಿಳಾ ಸಹಚರೆಯನ್ನು ಪೊಲೀಸರು ಬಂಧಿಸಿದರು. ಆಕೆಯ ವಿಚಾರಣೆ ವೇಳೆ ಸುಲಭವಾಗಿ ಹಣ ಗಳಿಸಲು ಕಾರುಗಳನ್ನು ಕದಿಯುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಸತತ ಶೋಧದ ನಂತರ, ಜುಲೈ 17 ರಂದು ಸಿಲ್ಕ್ ಬೋರ್ಡ್ ಬಳಿ ಪ್ರಮುಖ ಆರೋಪಿಯನ್ನು ವಿಶೇಷ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಯಿತು.

ಅತ್ಯಾಧುನಿಕ ತಂತ್ರಜ್ಞಾನದ ಬಳಸಿ ಕಳವು:

ಆರೋಪಿಯು ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಕಾರುಗಳ ಸಿಸ್ಟಮ್ ಡಿಕೋಡ್ ಮಾಡಿ, ನಕಲಿ ಕೀಗಳನ್ನು ತಯಾರಿಸುತ್ತಿದ್ದ. ನಂತರ ಲಾಕ್ ತೆಗೆದು ಕಾರುಗಳನ್ನು ಕದ್ದು, ರಾಜಸ್ಥಾನದ ಬಾರ್ಮರ್, ಬಾಲೋತ್ರಾ ಹಾಗೂ ಮರುಭೂಮಿ ಪ್ರದೇಶಗಳಲ್ಲಿರುವ ತಮ್ಮ ಪರಿಚಿತರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ನೀಡಿದ ಮಾಹಿತಿ ಆಧರಿಸಿ, ಜುಲೈ 24 ರಂದು ರಾಜಸ್ಥಾನದ ಧೋರಿಮನ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲೇಟಿ ಎಂಬಲ್ಲಿಂದ 35 ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

21 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖದೀಮರು:

ಬಂಧಿತ ಆರೋಪಿಗಳು ಬೆಂಗಳೂರು, ಹೈದರಾಬಾದ್, ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ದಾಖಲಾಗಿರುವ ಸುಮಾರು 21 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಡಿವೇಸಿಪಿ ಎಂ. ನಾರಾಯಣ್ ಹಾಗೂ ಎಸಿಪಿ ಸತೀಶ್ ಆರ್ ಅವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪರಪ್ಪನ ಅಗ್ರಹಾರ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಪಿ.ಜಿ. ನೇತೃತ್ವದ ಪೊಲೀಸ್ ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *