SUDDIKSHANA KANNADA NEWS/ DAVANAGERE/ DATE:11-01-2025
ದಾವಣಗೆರೆ: ಹರಿಹರ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಜ.14ಕ್ಕೆ ನಡೆಯುವ ಹರಜಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ನಿರ್ಧರಿಸಿರುವುದಕ್ಕೆ ಅಖಿಲ ಭಾರತ ಅಂಗಾಯತ ಪಂಚಮಸಾಲಿ ಮಹಾಸಭಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ವಿ. ಅಶೋಕ್ ಗೋಪನಾಳು ಮಾತನಾಡಿ ಪಂಚಮಸಾಲಿ ಸಮಾಜದ ನ್ಯಾಯಯುತ ಬೇಡಿಕೆಯಾದ 2ಎ ಮೀಸಲಾತಿ ನೀಡುವುದನ್ನು ವಿರೋಧಿಸಿ, ಆಡಳಿತವನ್ನು ದುರ್ಬಳಕೆ ಮಾಡಿಕೊಂಡು ಲಾಠಿ ಚಾರ್ಜ್ ಮಾಡಿಸಿ ನಮ್ಮ ಸಮಾಜದ 200ಕ್ಕೂ ಹೆಚ್ಚು ಹೋರಾಟಗಾರರು ಗಾಯಗೊಂಡಿರುವ ನೋವು ಇನ್ನೂ ಮಾಸಿಲ್ಲದಿದ್ದರೂ ಹರಿಹರದ ಶ್ರೀಗಳು ಲಾಠಿ ಚಾರ್ಜ್ ಮಾಡಲು ಕಾರಣರಾದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2ಎ ಮೀಸಲಾತಿ ವಿರೋಧ ಮಾಡಿದಾಗಲೂ ಅವರನ್ನು ಕರೆದು ಸನ್ಮಾನ ಮಾಡಿದ್ದೀರಿ. ಬೊಮ್ಮಾಯಿಯವರು 2ಎ ಮೀಸಲಾತಿ ಕೊಡದೆ ಇದ್ದರೂ ಅವರನ್ನು ಪೀಠಕ್ಕೆ ಕರೆದು ಸನ್ಮಾನ ಮಾಡಿದಿರಿ. ಈಗ ಸಿದ್ದರಾಮಯ್ಯನವರು ಮೀಸಲಾತಿಗೆ ಬಹಿರಂಗ ವಿರೋಧ ಮಾಡಿ, ಸಮಾಜದ ಹೋರಾಟಗಾರರ ಮೇಲೆ ಆಡಳಿತವನ್ನು ದುರ್ಬಳಕೆ ಮಾಡಿಕೊಂಡು ಪೊಲೀಸ್ ಇಲಾಖೆಯಿಂದ ಲಾಠಿ ಚಾರ್ಜ್ ಮಾಡಿರುವವರನ್ನು ಪೀಠಕ್ಕೆ ಕರೆದು ಹರ ಜಾತ್ರೆಯಲ್ಲಿ ಸನ್ಮಾನ
ಕಾರ್ಯಕ್ರಮ ನಡೆಸುತ್ತಿರುವುದು ಏನನ್ನೂ ಸೂಚಿಸುತ್ತದೆ ಎಂಬುದನ್ನು ಶ್ರೀಗಳು ಅರಿಯಬೇಕಾಗಿದೆ ಎಂದರು.
ಶ್ರೀಗಳ ಒಲವು ಸಮಾಜದ ಪರವೋ ಅಥವಾ ಸಮಾಜದ ನ್ಯಾಯಯುತ ಬೇಡಿಕೆಗಳನ್ನು ವಿರೋಧಿಸುತ್ತಿರುವ ರಾಜಕಾರಣಿಗಳ ಪರವೋ. ಈ ವಿಚಾರದ ಬಗ್ಗೆ ಚರ್ಚೆ ಮಾಡುವುದು ಅನಿವಾರ್ಯವಾಗಿದೆ.ಸಮಾಜದ ಒಳತಿಗಾಗಿ ಶ್ರಮಿಸುವ ದಾವಣಗೆರೆ ಜಿಲ್ಲೆಯ ಹಾಲಿ ಸಚಿವರು ಹಾಗೂ ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರುಗಳು ಹಾಗೂ ಮುಖಂಡರುಗಳನ್ನು, ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಸೇವಾ ಮುಖಂಡರುಗಳನ್ನು ಕರೆದು ಕಾರ್ಯಕ್ರಮ ಮಾಡಿದರೆ, ಅವರಿಗೂ ಸಹ ಪ್ರೋತ್ಸಾಹಿಸಿದಂತಾಗುತ್ತದೆ ಆದರೆ, ಸಮಾಜದ ನ್ಯಾಯಯುತ ಬೇಡಿಕೆಗಳನ್ನು ವಿರೋಧಿಸುತ್ತಿರುವ ಮುಖಂಡರನ್ನುಕರೆದು ಪ್ರಮುಖ ಕಾರ್ಯಕ್ರಮ ಮಾಡುತ್ತಿರುವುದನ್ನು ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಕೀಲರಾದ ಹೆಚ್.ಎಸ್. ಯೋಗೇಶ್, ಮಂಜು ಪೈಲ್ವಾನ್, ಕಲ್ಲೇಶಪ್ಪ ಕಾರಿಗನೂರು, ಗಿರೀಶ್ ಮರಡಿ, ಅಭಿ ಕಾಟನ್ ಬಕ್ಕೇಶ್, ಕೊಳೇನಹಳ್ಳಿ ನಾಗರಾಜ್, ಕ್ಯಾರಕಟ್ಟೆ ಕೊಟ್ರೇಗೌಡರು, ಶಂಕರ್ ಮತ್ತಿತರರಿದ್ದರು.