ಉತ್ತರ ಪ್ರದೇಶ: ತಾನು ದೊಡ್ಡ ಉದ್ಯಮಿ ಎಂದು ನಂಬಿಸಿ, ನಕಲಿ ಗುರುತಿನ ಚೀಟಿ ಬಳಸಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಕೋಟಿ ಕೋಟಿ ರೂಪಾಯಿ ವಂಚಿಸಿದ್ದ ಮಹಾ ವಂಚಕ ಹಾಗೂ ಆತನ ತಂದೆಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸೇವಾತಾ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ ತಿವಾರಿ ಅವರ ಅಳಿಯ ಪ್ರಖರ್ ತ್ರಿವೇದಿ ಹಾಗೂ ಆತನ ತಂದೆ ಅನುಜ್ ತ್ರಿವೇದಿ ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ: 2024ರಲ್ಲಿ ಬಿಜೆಪಿ ಶಾಸಕ ಜ್ಞಾನ ತಿವಾರಿ ತಮ್ಮ ಮಗಳಾದ ಪ್ರಜ್ಞಾಳನ್ನು ಅನುಜ್ ತ್ರಿವೇದಿ ಅವರ ಮಗ ಪ್ರಖರ್ ತ್ರಿವೇದಿಗೆ ನೀಡಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ಸಮಯದಲ್ಲಿ ತಮ್ಮನ್ನು ಮುಂಬೈನ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಗಳು ಎಂದು ಪರಿಚಯಿಸಿಕೊಂಡಿದ್ದರು. ತಮ್ಮ ಮೇಲಿದ್ದ ಅಪರಾಧ ಹಿನ್ನೆಲೆಯನ್ನು ಮುಚ್ಚಿಟ್ಟು ಶಾಸಕರ ಕುಟುಂಬಕ್ಕೆ ವಂಚಿಸಿದ್ದರು.
ಮದುವೆಯಾದ ಸುಮಾರು ಎರಡೂವರೆ ವರ್ಷಗಳ ನಂತರ ಆರೋಪಿ ಪ್ರಖರ್ ತ್ರಿವೇದಿಯ ನಿಜಬಣ್ಣ ಸಾಮಾಜಿಕ ಜಾಲತಾಣ ಹಾಗೂ ಇತರ ಮೂಲಗಳ ಮೂಲಕ ಶಾಸಕರ ಕುಟುಂಬಕ್ಕೆ ತಿಳಿಯಿತು. ಪ್ರಖರ್ ತ್ರಿವೇದಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಕಲಿ ಹೆಸರುಗಳನ್ನು ಬಳಸಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ ಮದುವೆಯಾಗಿದ್ದು, ಅವರಿಂದ ಕೋಟ್ಯಂತರ ರೂಪಾಯಿ ದೋಚಿರುವುದು ಬೆಳಕಿಗೆ ಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಶಾಸಕ ಜ್ಞಾನ ತಿವಾರಿ ತಮ್ಮ ಮಗಳನ್ನು ಮನೆಗೆ ಕರೆತಂದು, ಆರೋಪಿಗಳ ಕುಟುಂಬದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ಅಲ್ಲದೆ ರೇವುಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆರೋಪಿಗಳಾದ ಪ್ರಖರ್ ತ್ರಿವೇದಿ ಮತ್ತು ಅನುಜ್ ತ್ರಿವೇದಿಯನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಶಾಸಕರು, ತಮ್ಮ ಕುಟುಂಬಕ್ಕೆ ಮೋಸ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
Leave a comment