ದಾವಣಗೆರೆ: ಭ್ರಷ್ಟಾಚಾರ ಆರೋಪ ಯಾರ ಮೇಲಿಲ್ಲ? ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ಮೇಲೆ ಮುಖ್ಯಮಂತ್ರಿ ಆಗಿದ್ದು ಅಲ್ವ ಎಂದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಪ್ತರಾದ ಶಿವಗಂಗಾ ಬಸವರಾಜ್ ಪ್ರಶ್ನಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದಲ್ಲಾ ಒಂದು ಆರೋಪಗಳು ರಾಜಕಾರಣಿಗಳ ಮೇಲೆ ಇರುತ್ತವೆ. ಬಿಜೆಪಿಯವರು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರು ಜೈಲಿಗೆ ಹೋಗಿ ಬಂದ ಮೇಲೆ ಮುಖ್ಯಮಂತ್ರಿ ಮಾಡಿದ್ದು. ಭ್ರಷ್ಟಾಚಾರ ಸಾಬೀತಾಗಿ ಜೈಲಿನಲ್ಲಿ ಇದ್ದರೆ ಮಾತ್ರ ಅವಕಾಶ ಸಿಗಲ್ಲ. ಬಿ. ನಾಗೇಂದ್ರ ಮೇಲಿನ ಆರೋಪ ಸಾಬೀತಾಗಿಲ್ಲ, ಶಿಕ್ಷೆಯೂ ಪ್ರಕಟವಾಗಿಲ್ಲ. ಕಾನೂನು ಪ್ರಕಾರ ಹೋಗಿದ್ದಾರೆ, ಬಂದಿದ್ದಾರೆ. ಇನ್ನೂ ಆರೋಪಿ ಅಷ್ಟೇ. ಅಪರಾಧಿ ಅಲ್ಲ. ಇದನ್ನು ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದು ಸರಿಯಾಗಿಯೇ ಇದೆ. ಸುಮಾರು ಐದಾರು ಬಾರಿ ಮತ್ತು ಏಳು ಬಾರಿ ಗೆದ್ದವರು ಇದ್ದಾರೆ. ಮಂತ್ರಿ ಮಂಡಲದಲ್ಲಿ ಹಿರಿತನದ ಆಧಾರದ ಮೇಲೆ ಅವಕಾಶ ಸಿಗುತ್ತೆ ಎಂದುಕೊಂಡಿದ್ದರು. ಹೊಸಬರ ಪೈಕಿ ನಮಗೂ ಸಿಗುತ್ತದೆ ಎಂಬ ವಿಶ್ವಾಸ ಇತ್ತು. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಜಾತಿವಾರು, ಪ್ರಾಂತ್ಯವಾರು ಲೆಕ್ಕಾಚಾರ ಮಾಡಬೇಕಾಗುತ್ತದೆ. ಆಗಿ ಹೋಗಿದೆ. ಮಾತನಾಡುವ ಅವಶ್ಯಕತೆ ಇಲ್ಲ.
ಅಭಿವೃದ್ಧಿ ಬಗ್ಗೆ ಮಾತನಾಡಬೇಕಿದೆ ಅಷ್ಟೇ ಎಂದು ತಿಳಿಸಿದರು.
ಬಿ. ನಾಗೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾತನಾಡಲು ದೆಹಲಿಗೆ ಹೋಗುತ್ತಾರೆ. ಆದರೆ ಅವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ದೆಹಲಿಗೆ ಹೋಗಲು ಅನುಮತಿ ಸಿಕ್ಕಿಲ್ಲವೆಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮ್ಮ ಸರ್ಕಾರದ ಯೋಜನೆಗಳಿದ್ದರೆ ನಮ್ಮಲ್ಲಿಯೇ ಇರುತ್ತಾರೆ ಎಂದು ಶಿವಗಂಗಾ ಬಸವರಾಜ್ ಹೇಳಿದರು.





Leave a comment