Home ನವದೆಹಲಿ ಬಿಜೆಪಿ ನಾಯಕರು ಮೊದಲು ಸಂವಿಧಾನ ಓದಲಿ; ನಂತರ ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್‌ ಓದಲಿ: ಬಿ. ಕೆ. ಹರಿಪ್ರಸಾದ್ ಟಾಂಗ್!
ನವದೆಹಲಿದಾವಣಗೆರೆಬೆಂಗಳೂರು

ಬಿಜೆಪಿ ನಾಯಕರು ಮೊದಲು ಸಂವಿಧಾನ ಓದಲಿ; ನಂತರ ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್‌ ಓದಲಿ: ಬಿ. ಕೆ. ಹರಿಪ್ರಸಾದ್ ಟಾಂಗ್!

Share
ಬಿ. ಕೆ. ಹರಿಪ್ರಸಾದ್
Share

ಬೆಂಗಳೂರು: ಸಂವಿಧಾನದ 178ನೇ ವಿಧಿಯ ಪ್ರಕಾರ ವಿಧಾನಸಭೆಯ ಸಭಾಧ್ಯಕ್ಷರು ಮತ್ತು ಉಪಸಭಾಧ್ಯಕ್ಷರನ್ನು ವಿಧಾನಸಭೆಯೇ ಆಯ್ಕೆ ಮಾಡುತ್ತದೆ. 182ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಯನ್ನು ವಿಧಾನಪರಿಷತ್ತೇ ಆಯ್ಕೆ ಮಾಡುತ್ತದೆ. ಈ ಕನಿಷ್ಠ ಸಾಂವಿಧಾನಿಕ ಜ್ಞಾನವೂ ಇಲ್ಲದೆ ಬಿಜೆಪಿ ನಾಯಕರು ತೌಡು ಕುಟ್ಟುವುದನ್ನು ಬಿಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿ ಪ್ರಕಟಿಸಿದೆ ಅಷ್ಟೇ; ಅವರನ್ನು ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡಿಲ್ಲ. ಸದನದಲ್ಲಿ ನಡೆಯಬೇಕಾದ ಅಧಿಕೃತ ಆಯ್ಕೆ ಪ್ರಕ್ರಿಯೆ ಎಂದಿನಂತೆಯೇ ನಡೆಯಲಿದೆ. ಪಕ್ಷದ ಅಭ್ಯರ್ಥಿಯ ಘೋಷಣೆಗೂ, ಸದನ ನಡೆಸುವ ಸಾಂವಿಧಾನಿಕ ಆಯ್ಕೆಗೂ ಇರುವ ವ್ಯತ್ಯಾಸ ತಿಳಿಯದೆ “ಸಂವಿಧಾನ ವಿರೋಧಿ” ಎಂದು ಕೂಗುವುದು ಅಜ್ಞಾನದ ಪ್ರದರ್ಶನವಲ್ಲದೆ ಮತ್ತೇನು? ಎಂದು ಪ್ರಶಅನಿಸಿದ್ದಾರೆ.

2019ರಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವವೇ ಕರ್ನಾಟಕ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರನ್ನು ಅಂತಿಮಗೊಳಿಸಿ, ನಾಮಪತ್ರ ಸಲ್ಲಿಸುವಂತೆ ನಿರ್ದೇಶಿಸಿರಲಿಲ್ಲವೇ? 2024ರಲ್ಲಿ ಲೋಕಸಭೆಯ ಅಧಿಕೃತ ಚುನಾವಣೆಗೂ ಮೊದಲೇ ಓಂ ಬಿರ್ಲಾ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಪ್ರಕಟಿಸಿರಲಿಲ್ಲವೇ? ಎಂದು ಕೇಳಿದ್ದಾರೆ.

2026ರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೇ ಸದನದ ಆಯ್ಕೆಗೂ ಮೊದಲೇ ರಥೀಂದ್ರ ಬೋಸ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಬಹಿರಂಗವಾಗಿ ಘೋಷಿಸಿರಲಿಲ್ಲವೇ? ಬಿಜೆಪಿ ಮಾಡಿದರೆ ಅದು “ಅಭ್ಯರ್ಥಿಯ ಆಯ್ಕೆ”; ಕಾಂಗ್ರೆಸ್ ಮಾಡಿದರೆ ಮಾತ್ರ “ಸಂವಿಧಾನ ವಿರೋಧ”ವೇ? ಎಂದು ಹೇಳಿದ್ದಾರೆ.

ಅಷ್ಟಕ್ಕೂ ಸಂವಿಧಾನದ ಪಾವಿತ್ರ್ಯದ ಕುರಿತು ಬಿಜೆಪಿ ನಮಗೆ ಪಾಠ ಹೇಳುವ ಮೊದಲು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕೇ ಇಲ್ಲದ 12 ನಾಮನಿರ್ದೇಶಿತ ಸದಸ್ಯರ ಮತಗಳನ್ನು ಸೇರಿಸಿಕೊಂಡು, ಕೇವಲ ಆರು ಮತಗಳ ಅಂತರದಲ್ಲಿ ಗೆದ್ದ ಎಂ.ಕೆ. ಪ್ರಾಣೇಶ್ ರ ವಿಧಾನಪರಿಷತ್ತಿನ ಉಪಸಭಾಪತಿ ಎಂಬ ಸಾಂವಿಧಾನಿಕ ಹುದ್ದೆಯಲ್ಲಿ ಕೂರಿಸಿದಾಗ ಬಿಜೆಪಿಗೆ ಸಂವಿಧಾನ ನೆನಪಾಗಲಿಲ್ಲವೇ?
ಎಂದು ಪ್ರಶ್ನಿಸಿದ್ದಾರೆ.

“ಸಾಂವಿಧಾನಿಕ ಅಕ್ರಮವನ್ನು ಉಳಿಸಲು ಮತದಾನದ ಗೌಪ್ಯತೆಯನ್ನು ನೆಪವಾಗಿ ಬಳಸಲಾಗದು” ಎಂದು ಹೇಳಿ ಪ್ರಾಣೇಶ್ ರ ಚುನಾವಣೆಯನ್ನೇ ರದ್ದುಗೊಳಿಸಿದೆ. ಚುನಾವಣೆಯ ಪಾವಿತ್ರ್ಯವನ್ನು ಉಲ್ಲಂಘಿಸಿ ಪಡೆದ ಸ್ಥಾನವನ್ನು ಸಾಂವಿಧಾನಿಕ ಹುದ್ದೆಗೆ ಮೆಟ್ಟಿಲಾಗಿ ಬಳಸಿಕೊಂಡ ಬಿಜೆಪಿ, ಇಷ್ಟು ಸ್ಪಷ್ಟವಾದ ನ್ಯಾಯಾಲಯದ ತೀರ್ಪಿನ ನಂತರ ರಾಜ್ಯದ ಜನರ ಬಳಿ ಕನಿಷ್ಠ ಕ್ಷಮೆಯನ್ನಾದರೂ ಕೇಳಬೇಕಿತ್ತಲ್ಲವೇ? ಎಂದಿರುವ ಅವರು, ಅಸಿಂಧು ಮತಗಳ ಬಲದಿಂದ ಗೆದ್ದವರನ್ನು ಉಪಸಭಾಪತಿ ಹುದ್ದೆಯಲ್ಲಿ ಕೂರಿಸಲು ನಾಚಿಕೆಯಾಗದವರು, ಇಂದು ಒಂದು ಪಕ್ಷದ ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವ ಲೆಟರ್‌ಹೆಡ್ ಹಿಡಿದು ಸಂವಿಧಾನದ ಬಿಟ್ಟಿ ಪ್ರವಚನ ಮಾಡುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಅಳೆಯುವ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಪಾಠ ಬೇಕಾಗಿಲ್ಲ ಎಂದು ಟಾಂಗ್ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *