ವಾಶಿಮ್, ಮಹಾರಾಷ್ಟ್ರ: ದೀರ್ಘ 15 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, 2011ರ ಲಾಕಪ್ ಡೆತ್ (ಕಸ್ಟಡಿ ಮರಣ) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ವಾಶಿಮ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಂಬತ್ತು ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಘಟನೆಯ ಹಿನ್ನೆಲೆ:
ಮೇ 10, 2011 ರಂದು ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಪಾರ್ದಿ ಸಮುದಾಯದ ಬೇಗ್ಯಾ ಪವಾರ್ (23) ಎಂಬ ಯುವಕನನ್ನು ರಿಸೋಡ್ ಪೊಲೀಸರು ಮುಂಜಾನೆ 3 ಗಂಟೆಗೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಆದರೆ, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಪೊಲೀಸರ ಅಮಾನವೀಯ ಹಲ್ಲೆಯಿಂದಾಗಿ ಯುವಕ ಮೃತಪಟ್ಟಿದ್ದನು. ವೈದ್ಯಕೀಯ ತಪಾಸಣೆಯಲ್ಲಿ ಯುವಕನ ದೇಹದ ಮೇಲೆ ತೀವ್ರವಾದ ಮೂಳೆ ಮುರಿತಗಳು ಪತ್ತೆಯಾಗಿದ್ದವು.
ನ್ಯಾಯಕ್ಕಾಗಿ ಹೋರಾಟ:
ಘಟನೆಯ ನಂತರ ಠಾಣಾಧಿಕಾರಿ ವಿರುದ್ಧ ದೂರು ದಾಖಲಿಸಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದರು. ತದನಂತರ ಪಾರ್ದಿ ಸಮುದಾಯ ಮತ್ತು ಯುವಕನ ವೃದ್ಧ ಪೋಷಕರು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ (CID) ತನಿಖೆಗೆ ವಹಿಸಲಾಯಿತು. ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಪೊಲೀಸರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.
ಕೋರ್ಟ್ ತೀರ್ಪು:
ದೀರ್ಘ 15 ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯವು ರಿಸೋಡ್ ಪೊಲೀಸ್ ಠಾಣಾಧಿಕಾರಿ ಮಹಾದೇವ್ ಮಾಣಿಕ್ ಧಾಂಡೆ ಸೇರಿದಂತೆ ಒಟ್ಟು 9 ಪೊಲೀಸರನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಸದ್ಯ ಅಪರಾಧಿಗಳನ್ನು ವಾಶಿಮ್ ಜೈಲಿನಲ್ಲಿ ಇರಿಸಲಾಗಿದ್ದು, ಶೀಘ್ರದಲ್ಲೇ ಅಮರಾವತಿ ಜೈಲಿಗೆ ಸ್ಥಳಾಂತರಿಸಲಾಗುವುದು. “15 ವರ್ಷಗಳ ಕಾಯುವಿಕೆಯ ನಂತರ ನನ್ನ ಮಗನಿಗೆ ಕೊನೆಗೂ ನ್ಯಾಯ ಸಿಕ್ಕಿದೆ” ಎಂದು ಮೃತನ ತಾಯಿ ಕಣ್ಣೀರಿಟ್ಟಿದ್ದಾರೆ.





Leave a comment