ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪ್ರಮುಖ ಆರೋಪಿ ಸಿಯಾ ಗೋಯಲ್ ಪೊಲೀಸರ ಮುಂದೆ ಆಡಿರುವ ಮಾತುಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.
ನವೆಂಬರ್ನಲ್ಲಿ ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸಲು ಹೆತ್ತವರ ಮುಂದೆ ನಿಲ್ಲುವ ಧೈರ್ಯವಿಲ್ಲದೆ, ಭಾವಿ ಪತಿಯನ್ನೇ ಕಂದಕಕ್ಕೆ ತಳ್ಳಿ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ಕುಟುಂಬದ ಗೌರವಕ್ಕಾಗಿ ಕೊಲೆ!
ಜೂನ್ 18 ರಂದು ಲೋಹಗಢ್ ಕೋಟೆಯ ಕಂದಕಕ್ಕೆ ಬಿದ್ದು ಉದ್ಯಮಿ ಕೇತನ್ ಅಗರ್ವಾಲ್ ಸಾವನ್ನಪ್ಪಿದ್ದರು. ಮೊದಲು ಇದು ಆಕಸ್ಮಿಕ ಸಾವು ಎಂದು ಭಾವಿಸಲಾಗಿತ್ತಾದರೂ, ಪೊಲೀಸರ ತನಿಖೆ ವೇಳೆ ಸಿಯಾ ಗೋಯಲ್ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ, “ಮದುವೆ ಬೇಡ ಎಂದು ಹೆತ್ತವರಿಗೆ ತಿಳಿಸಿ ಅವರ ಮನಸ್ಸಿಗೆ ನೋವುಂಟು ಮಾಡುವ ಬದಲು, ಕೇತನ್ನನ್ನು ಮುಗಿಸುವುದೇ ನನಗೆ ಸುಲಭದ ಹಾದಿ ಎಂದು ಅನಿಸಿತು” ಎಂದು ಸಿಯಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
238 ಗಂಟೆಗಳ ಕಾಲ್ ರೆಕಾರ್ಡ್ ಪತ್ತೆ!
ಸದ್ಯ ಪುಣೆ ಮತ್ತು ಲೋನಾವಾಲಾ ಪೊಲೀಸರ ಆರು ಪ್ರತ್ಯೇಕ ತಂಡಗಳು ಈ ಪ್ರಕರಣದ ತನಿಖೆ ನಡೆಸುತ್ತಿವೆ. ಸಿಯಾ ಗೋಯಲ್ ಸಹೋದರ ಸಾಹಿಲ್ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ದೀಪಾವಳಿ ಹಬ್ಬದ ಪಾರ್ಟಿಯೊಂದರಲ್ಲಿ ಸಿಯಾಗೆ ಚೇತನ್ ಪರಿಚಯವಾಗಿದ್ದ ಎಂದು ಆತ ತಿಳಿಸಿದ್ದಾನೆ. ಪೊಲೀಸರು ಇಬ್ಬರ ಮೊಬೈಲ್ ಕಾಲ್ ರೆಕಾರ್ಡ್ಗಳನ್ನು ಪರಿಶೀಲಿಸಿದಾಗ ಶಾಕಿಂಗ್ ಸತ್ಯ ಹೊರಬಿದ್ದಿದೆ. ಜನವರಿಯಿಂದ ಈಚೆಗೆ ಇವರಿಬ್ಬರು ಬರೋಬ್ಬರಿ 2,000 ಕ್ಕೂ ಹೆಚ್ಚು ಬಾರಿ ಮಾತನಾಡಿದ್ದು, ಒಟ್ಟು 238 ಗಂಟೆಗಳ ಕಾಲ ಫೋನ್ನಲ್ಲಿ ಕಳೆದಿದ್ದಾರೆ ಎಂಬುದು ದೃಢಪಟ್ಟಿದೆ.
ಸದ್ಯ ಪೊಲೀಸರು ಇಬ್ಬರ ಮೊಬೈಲ್ನಿಂದ ಡಿಲೀಟ್ ಆಗಿರುವ ಚಾಟ್ಗಳು ಮತ್ತು ಡೇಟಾವನ್ನು ರಿಕವರಿ ಮಾಡಲು ಮುಂದಾಗಿದ್ದು, ಮದುವೆ ಕುದುರಿಸಿದ್ದ ಮಧ್ಯಸ್ಥಿಕೆದಾರರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಸಿಯಾ ಪೋಷಕರು ನಮಗೆ ಚೇತನ್ ಯಾರೆಂದೇ ತಿಳಿಯದು ಎನ್ನುತ್ತಿದ್ದರೆ, ಇತ್ತ ಸಿಯಾ ವಕೀಲರು ಚೇತನ್ ಕೇವಲ ಸ್ನೇಹಿತ ಎಂದು ವಾದಿಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.





Leave a comment