Home ಕ್ರೈಂ ನ್ಯೂಸ್ ಎಲ್ಲೆಂದರಲ್ಲಿ ಕಸ ಎಸೆದರೆ ಭಾರೀ ದಂಡ, ವಾಹನಗಳ ಶುಚಿಗೆ ನೀರು ಬಳಸಿದ್ರೆ ಕ್ರಮ: ಏಕೆ ಗೊತ್ತಾ? 
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಎಲ್ಲೆಂದರಲ್ಲಿ ಕಸ ಎಸೆದರೆ ಭಾರೀ ದಂಡ, ವಾಹನಗಳ ಶುಚಿಗೆ ನೀರು ಬಳಸಿದ್ರೆ ಕ್ರಮ: ಏಕೆ ಗೊತ್ತಾ? 

Share
ಕಸ
Share

ದಾವಣಗೆರೆ: ನಗರದ ಸ್ವಚ್ಛತೆಯನ್ನು ನಾಗರಿಕರು ಹಾಳು ಮಾಡಬಾರದು, ಆದರೆ ರಸ್ತೆ ಬದಿಗಳಲ್ಲಿ ಕಸ ಸುರಿಯುತ್ತಿದ್ದಾರೆ. ಈ ಹಿಂದೆ ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದರೂ ಸಹ, ಸಾರ್ವಜನಿಕರು ಮಾತ್ರ ರಸ್ತೆ ಬದಿಗೆ ಕಸ ಎಸೆಯುವ ಅಭ್ಯಾಸವನ್ನು ಬಿಟ್ಟಿಲ್ಲ. ಇದರಿಂದಾಗಿ ನಗರದ ಸೌಂದರ್ಯ ಹಾಗೂ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ದಾವಣಗೆರೆಯಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವ ಜಾಗಗಳನ್ನು (ಬ್ಲಾಕ್ ಸ್ಪಾಟ್ಸ್) ಜಿಪಿಎಸ್ ಲೋಕೇಶನ್ ಮೂಲಕ ಗುರುತಿಸಿ, ಆ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಈ ಬ್ಲಾಕ್ ಸ್ಪಾಟ್‌ಗಳ ಮೇಲೆ ರಾತ್ರಿ ವೇಳೆಯೂ ಸೇರಿದಂತೆ ಸತತ ಒಂದು ತಿಂಗಳ ಕಾಲ ಕಣ್ಣಿಡಲಾಗುವುದು. ನಿಯಮ ಮೀರಿ ಕಸ ಹಾಕುವವರಿಗೆ ಗರಿಷ್ಠ ಪ್ರಮಾಣದ ದಂಡ ವಿಧಿಸಲಾಗುವುದು. ಅಷ್ಟೇ ಅಲ್ಲದೆ, ಅವರ ಹೆಸರು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಿ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.

ಮೊದಲ ಹಂತದಲ್ಲಿ ದಂಡ ಮತ್ತು ಫೋಟೋ ಪ್ರಕಟಿಸಿದ ನಂತರವೂ ಸುಧಾರಿಸದಿದ್ದರೆ, ಮುಂದಿನ ಹಂತವಾಗಿ ಅವರು ಎಲ್ಲೆಲ್ಲಿ ಕಸ ಹಾಕಿದ್ದಾರೋ, ಅದೇ ಕಸವನ್ನು ತಂದು ಅವರ ಮನೆಯ ಮುಂದೆಯೇ ಸುರಿಯಲು ನಿರ್ಧರಿಸಲಾಗಿದೆ , ನಿಯಮ ಉಲ್ಲಂಘಿಸುವವರ ಸೈಟ್ ಅಥವಾ ಮನೆಗೆ ದುಪ್ಪಟ್ಟು ತೆರಿಗೆ ವಿಧಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದರು.

ದೇಶಸೇವೆ ಎಂದರೆ ಕೇವಲ ಹಣ ನೀಡುವುದು ಮಾತ್ರವಲ್ಲ, ಇಂತಹ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೂ ಕೂಡ ದೇಶಸೇವೆಯಾಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ, ಪೌರಕಾರ್ಮಿಕರು ಮನೆ ಮನೆಗೆ ಬಂದಾಗ ನಾಲ್ಕು ವಿಧದ ಕಸವನ್ನು ವಿಂಗಡಿಸಿ ನೀಡಬೇಕು ಎಂದರು.

ಸ್ವಚ್ಛತೆ ಮಾತ್ರವಲ್ಲದೆ ನೀರಿನ ಮಿತವ್ಯಯದ ಕಡೆಗೂ ಗಮನ ಹರಿಸಬೇಕು. ಪ್ರತಿದಿನ ಮನೆ ಮುಂದೆ ನೀರು ಹಾಕಿ ಪೋಲು ಮಾಡುವ ಬದಲು ವಾರಕ್ಕೆ ಒಮ್ಮೆ ಮಾತ್ರ ತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನೀರು ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮ:

ನಗರದಲ್ಲಿ ಬೆಳಗ್ಗಿನ ಅವಧಿಯಲ್ಲಿ ವಾಹನಗಳನ್ನು ತೊಳೆಯಲು ಹಾಗೂ ಮನೆ ಮುಂದಿನ ರಸ್ತೆಗಳಿಗೆ ಪೈಪ್‌ಗಳ ಮೂಲಕ ನೂರಾರು ಲೀಟರ್ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಿರುವುದು ಕಂಡುಬಂದಿದೆ. ಇಂತಹ ಕೃತ್ಯಗಳಿಂದಾಗಿ ಡಾಂಬರು ರಸ್ತೆಗಳು ಹಾಳಾಗುತ್ತಿವೆ. ನೀರನ್ನು ಪೋಲು ಮಾಡುವ ಮನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಹಾನಗರ ಪಾಲಿಕೆಗೆ ಈಗಾಗಲೇ ನಿರ್ದೇಶನ ನೀಡಲಾಗಿದ್ದು, ಅಂತಹ ಮನೆಗಳಿಗೆ ಭಾರಿ ಮೊತ್ತದ ದಂಡ ವಿಧಿಸುವುದರ ಜೊತೆಗೆ ನೀರಿನ ಸಂಪರ್ಕವನ್ನು (Water Connection) ಕಡಿತಗೊಳಿಸಲು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಎಂದರು.

Share

Leave a comment

Leave a Reply

Your email address will not be published. Required fields are marked *