ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಜಟಾಪಟಿ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಕಾಲಾವಕಾಶ ಕೇಳಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸದ್ಯದಲ್ಲೇ ದೆಹಲಿಗೆ ಬರುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಸಚಿವ ಸಂಪುಟ ಪುನಾರಚನೆ ಹಾಗೂ 2.5 ವರ್ಷದ ಸೂತ್ರ:
ಅಧಿಕೃತ ಮೂಲಗಳ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚಿಸಲು ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ. ಆದರೆ, ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಗರು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಸರ್ಕಾರ 2.5 ವರ್ಷ ಪೂರೈಸುತ್ತಿರುವುದರಿಂದ, ಸರ್ಕಾರ ರಚನೆ ಸಂದರ್ಭದಲ್ಲಿ ಹೈಕಮಾಂಡ್ ನೀಡಿದ್ದ “ಅಧಿಕಾರ ಹಂಚಿಕೆ” ಸೂತ್ರದಂತೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಅವರ ಬಣ ಒತ್ತಾಯಿಸುತ್ತಿದೆ.
“ಶೀಘ್ರದಲ್ಲೇ ತೆರೆ ಬೀಳಲಿದೆ” ಎಂದ ಸಚಿವ ಜಾರಕಿಹೊಳಿ:
ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, “ದಿೆಹಲಿ ಸಭೆಯಲ್ಲಿ ನಾಯಕತ್ವದ ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ. ಹೈಕಮಾಂಡ್ ನಮ್ಮನ್ನು ಶೀಘ್ರದಲ್ಲೇ ದೆಹಲಿಗೆ ಕರೆಯಲಿದ್ದು, ಅಲ್ಲಿಯೇ ಎಲ್ಲವೂ ಬಗೆಹರಿಯಲಿದೆ” ಎಂದು ಹೇಳಿದ್ದಾರೆ.
ದಲಿತ ಸಿಎಂ ಬೇಡಿಕೆ ಹಾಗೂ ಕೇರಳ ಕನೆಕ್ಷನ್:
ಇದೇ ವೇಳೆ ಕೇರಳದ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರು, ಅಲ್ಲಿ ಆಂತರಿಕವಾಗಿ ಕರ್ನಾಟಕದ ನಾಯಕತ್ವ ಬದಲಾವಣೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಹಿರಿಯ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, “ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾಯಿಸುವುದಾದರೆ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಮುಂದಿನ ಸಿಎಂ ಮಾಡಬೇಕು” ಎಂದು ಹೇಳುವ ಮೂಲಕ ‘ದಲಿತ ಸಿಎಂ’ ಕಾರ್ಡ್ ಮುಂಚೂಣಿಗೆ ತಂದಿದ್ದಾರೆ.
ಹೈಕಮಾಂಡ್ ಭೇಟಿಯ ನಂತರ ಕರ್ನಾಟಕ ಕಾಂಗ್ರೆಸ್ನಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆ ದಟ್ಟವಾಗಿದೆ.





Leave a comment