ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘೋರ ಘಟನೆಯೊಂದು ನಡೆದಿದೆ. ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾಳೆ ಎಂಬ ಆರೋಪದ ಮೇಲೆ ಭಾರತೀಯ ನೌಕಾಪಡೆಯ ಏರ್ಕ್ರಾಫ್ಟ್ ತಂತ್ರಜ್ಞನೊಬ್ಬ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿ, ಶವವನ್ನು ತುಂಡರಿಸಿ ಫ್ರಿಡ್ಜ್ನಲ್ಲಿಟ್ಟಿದ್ದಾನೆ.
ಘಟನೆಯ ವಿವರ: ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವ ರವೀಂದ್ರ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಈತ 28 ವರ್ಷದ ಮೌನಿಕಾ ಎಂಬಾಕೆಯೊಂದಿಗೆ ಸಂಬಂಧ ಹೊಂದಿದ್ದನು. ಘಟನೆ ನಡೆದ ದಿನ ರವೀಂದ್ರನ ಪತ್ನಿ ತವರು ಮನೆಗೆ ತೆರಳಿದ್ದರು. ಈ ಸಮಯವನ್ನು ಬಳಸಿಕೊಂಡ ರವೀಂದ್ರ, ಮೌನಿಕಾಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾನೆ.
ಮಧ್ಯರಾತ್ರಿಯವರೆಗೆ ಇಬ್ಬರೂ ಸೌಹಾರ್ದತೆಯಿಂದಿದ್ದರೂ, ನಂತರ ಹಣದ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಹಣಕ್ಕಾಗಿ ಮೌನಿಕಾ ನಿರಂತರವಾಗಿ ಪೀಡಿಸುತ್ತಿದ್ದಾಳೆ ಎಂಬ ಸಿಟ್ಟಿನಿಂದ ರವೀಂದ್ರ ಮನೆಯಲ್ಲಿದ್ದ ಕತ್ತಿಯಿಂದ ಆಕೆಯನ್ನು ಇರಿದು ಸಾಯಿಸಿದ್ದಾನೆ.
ಸಾಕ್ಷ್ಯ ನಾಶಕ್ಕೆ ಯತ್ನ: ಹತ್ಯೆಯ ನಂತರ ಸಿಕ್ಕಿಬೀಳುವ ಭಯದಿಂದ ಶವವನ್ನು ಎರಡು ತುಂಡುಗಳಾಗಿ ಕತ್ತರಿಸಿದ ರವೀಂದ್ರ, ಒಂದು ಭಾಗವನ್ನು ಫ್ರಿಡ್ಜ್ನಲ್ಲಿ ಅಡಗಿಸಿಟ್ಟಿದ್ದಾನೆ. ಮತ್ತೊಂದು ಭಾಗವನ್ನು ಚೀಲದಲ್ಲಿ ಕಟ್ಟಿ ಮನೆಯ ಮೂಲೆಯಲ್ಲಿಟ್ಟಿದ್ದನು. ಬಳಿಕ ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





Leave a comment