SUDDIKSHANA KANNADA NEWS/DAVANAGERE/DATE:13_12_2025
ಭೀಮಸಮುದ್ರ: ರೈತ ಸಂಘದ ಹೋರಾಟಗಾರ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರಕ್ಕೆ ಆಗಮಿಸಿದ್ದರು. ಭೀಮಸಮುದ್ರದಿಂದ ವಿ ಪಾಳ್ಯ ಗ್ರಾಮದವರೆಗೆ ತಮ್ಮ ಕಾರಿನಲ್ಲಿ ಪ್ರಯಾಣ ಮಾಡುತ್ತಾ ರಸ್ತೆ ವೀಕ್ಷಿಸಿದರು. ಈ ವೇಳೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ರಾಜ್ಯ ಸರ್ಕಾರದ ಬೇಜವಾಬ್ದಾರಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.
ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ಭೀಮಸಮುದ್ರ ಸುತ್ತಮುತ್ತ ಗಣಿಗಾರಿಕೆ ಕಂಪನಿಗಳ ನೂರಾರು ಲಾರಿಗಳು ದಿನನಿತ್ಯ ಓಡಾಡುತ್ತಿವೆ. ಆದರೆ ರಸ್ತೆ ಹಾಳಾಗಿದ್ದರೂ ಯಾರೂ ಗಮನ ಹರಿಸಿಲ್ಲ. ನನಗೆ ಮಾಹಿತಿ ಬಂದ ಪ್ರಕಾರ ಸುಮಾರು ಈ ರಸ್ತೆಯಲ್ಲಿ ನೂರರಿಂದ 150 ಮಂದಿ ಬೈಕ್ ಸವಾರರು ಈ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದಾರೆ. ವಿ ಪಾಳ್ಯ, ಕಟ್ಟೆಮಳಲಿ ಗ್ರಾಮಗಳಿಗೆ ರಾತ್ರಿ 108 ಆಂಬುಲೆನ್ಸ್ ಸಹ ಬರಲ್ಲ. ರಾತ್ರಿ ತುರ್ತು ಚಿಕಿತ್ಸೆ ಪಡೆಯಲು ಗ್ರಾಮಸ್ಥರಿಗೆ ಆಗುತ್ತಿಲ್ಲ. ಗರ್ಭಿಣಿಯರು ಆಸ್ಪತ್ರೆಗೆ ಹೋಗುವುದು ದುಸ್ತರ ಎಂದು ತಿಳಿಸಿದರು.
ವಯಸ್ಸಾದವರಿಗೆ ಲಾರಿಗಳಿಂದ ಓಡಾಟದಿಂದ ಬರುತ್ತಿರುವ ಧೂಳಿನಿಂದ ವಯೋವೃದ್ಧರು ಉಸಿರಾಟಕ್ಕೂ ತೊಂದರೆ ಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಮಸ್ಯೆಗಳ ಸುಳಿಯಲ್ಲಿ ಗ್ರಾಮಸ್ಥರು ಬದುಕುವುದೇ ಕಷ್ಟವಾಗಿದ್ದರೂ ರಸ್ತೆ ರಿಪೇರಿ ಮಾಡಿಸದಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.
ಸ್ಥಳೀಯ ಬೆಳೆಗಳಾದ ತೆಂಗು ಅಡಿಕೆ, ಮೆಕ್ಕೆಜೋಳ ಸೇರಿದಂತೆ ಈ ಭಾಗದಲ್ಲಿ ಬೆಳೆಯುವ ಧೂಳು ಹಿಡಿದು ಬೆಳೆ ನಾಶವಾಗಿದೆ ಎಂದು ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ಸ್ಥಳೀಯ ರೈತ ಸಂಘದ ಮುಖಂಡರು ನನ್ನನ್ನು ಇಲ್ಲಿಗೆ ಬಂದು ನೋಡುವಂತೆ ಹೇಳಿದ್ದರು. ಹಾಗಾಗಿ ಬಂದಿದ್ದೇನೆ. ಇಲ್ಲಿ ಬಂದು ನೋಡಿದ ಮೇಲೆ ಜನರ ನರಕದರ್ಶನದ ಬದುಕು ಗೊತ್ತಾಗಿದೆ ಎಂದು ಹೇಳಿದರು.
ಅಡಿಕೆ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಬಲ ಬೆಲೆ ನೀಡಬೇಕಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ. ಅಡಿಕೆ, ತೆಂಗು ಹಾಗೂ ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಬೆಳೆ ವಿಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಭೂತಯ್ಯ ಮಾತನಾಡಿ ಡಿಸೆಂಬರ್ 22ರಂದು ಭೀಮಸಮುದ್ರಕ್ಕೆ ದರ್ಶನ್ ಪುಟ್ಟಣ್ಣಯ್ಯನವರು ಕೂಡ ಆಗಮಿಸುತ್ತಾರೆ. ಅಂದು ರಸ್ತೆಯ ವೀಕ್ಷಣೆ ಹಾಗೂ ಸ್ಥಳೀಯರೊಂದಿಗೆ ಚರ್ಚೆ ನಡೆಸುತ್ತಾರೆ. ಸಮಸ್ಯೆ ಪರಿಹರಿಸಲು ಸರ್ಕಾರದ ಗಮನ ಸೆಳೆಯಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದರ್ಶನ್ ಪುಟ್ಟಣ್ಣವರಿಗೆ ಭೀಮಸಮುದ್ರ ರೈತ ಸಂಘದ ಮುಖಂಡರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ರೈತ ಸಂಘದ ಮುಖಂಡರಾದ ಎ. ಎಲ್. ಕೆಂಪೇಗೌಡ, ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ ಧನಂಜಯ್ ಹಂಪಯ್ಯ, ರೈತ ಸಂಘದ ಅಧ್ಯಕ್ಷ ಶಂಕರ್ ಮೂರ್ತಿ, ಉಪಾಧ್ಯಕ್ಷ ಪೂರಿ ನಾಯಕ, ಮುಖಂಡರಾದ ಶಿವಕುಮಾರ್, ರಘು, ಪ್ರಸನ್ನ ಕುಮಾರ್, ಈಶಣ್ಣ, ವೀರಣ್ಣ, ನಾಗರಾಜ್ ನಾಯಕ್, ಶೈಲೂ ಎಸ್. ಪಟೇಲ್, ಎಸ್. ಕೆ. ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.





Leave a comment