SUDDIKSHANA KANNADA NEWS/ DAVANAGERE/ DATE:11-10-2024
ದಾವಣಗೆರೆ: ಜಿಲ್ಲೆಯ 32 ಗ್ರಾಮ ಪಂಚಾಯತಿಗಳು ಕ್ಷಯರೋಗ ಮುಕ್ತ ಪಂಚಾಯಿತಿಗಳಾಗಿವೆ. 2024 ರ ಸೆಪ್ಟಂಬರ್ ತಿಂಗಳಲ್ಲಿ 49 ಕುಷ್ಠರೋಗಿಗಳು ಗುಣಮುಖರಾಗಿದ್ದು 29 ಹೊಸ ಕೇಸ್ ದಾಖಲಾಗಿದ್ದಾರೆ.
ಕ್ಷಯರೋಗ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತಿಂಗಳಿಗೆ ರೂ 500 ನೀಡಲಾಗುತ್ತಿದ್ದು. ಇದರ ಬದಲಾಗಿ ನವೆಂಬರ್ 1 ರಿಂದ 1000 ನೀಡಲಾಗುವುದು. ನಿಕ್ಷಯ ಮಿತ್ರ ಯೋಜನೆ ಖಾಸಗಿ ವಲಯದಲ್ಲಿ ಪ್ರತಿ ರೋಗಿಗೆ 500 ರೂ. ಹಾಗೂ ಚಿಕಿತ್ಸೆ ಪೂರ್ಣಗೊಂಡ ನಂತರ 2 ವರ್ಷಗಳವರೆಗೆ ರೋಗಿಯ ನಿಗಾವಹಿಸಲಾಗುತ್ತದೆ.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಮಾತನಾಡಿ, ಕುಷ್ಠರೋಗ, ಕ್ಷಯರೋಗದ ಕುರಿತಂತೆ ಸಾರ್ವಜನಿಕರಿಗೆ ವ್ಯಾಪಕವಾಗಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕುಷ್ಠರೋಗ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಆಶಾ ಕಾರ್ಯಕರ್ತೆಯರು, ಸ್ಥಳೀಯ ವೈದ್ಯರು ಗ್ರಾಮದ ಪ್ರತಿ ಮನೆಮನೆಗೂ ಭೇಟಿ ನೀಡಿ ಕುಷ್ಠರೋಗ ಪತ್ತೆ ಹಚ್ಚುವ ಬಗ್ಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕುಷ್ಠರೋಗದ ಪ್ರಾರಂಭಿಕ ಗುಣಲಕ್ಷಣಗಳನ್ನು ಖಚಿತಪಡಿಸಿಕೊಂಡು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ. ಅತಿ ಹೆಚ್ಚು ಮರಣ ಹೊಂದಿದ ಪ್ರದೇಶಗಳಲ್ಲಿ ಕ್ಷಯರೋಗ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿ, ಪ್ರತಿ ತಾಲ್ಲೂಕು ಗ್ರಾಮ ಪಂಚಾಯತಿ
ವ್ಯಾಪ್ತಿಯೊಳಗಿನ ಗ್ರಾಮಗಳ ಮನೆ ಮೆನೆಗೆ ತೆರಳಿ ಪರಿಶೀಲನೆ ಮಾಡಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ವಿಶ್ವ ದಿನಾಚರಣೆ ಅಂಗವಾಗಿ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳುತ್ತಿರುವವರು ಟೆಲಿ ಮನಸ್ಗೆ 14416 ಗೆ ಕರೆ ಮಾಡಿ ಮುಕ್ತ ಸಮಾಲೋಚನೆ ಮಾಡಬಹುದು ಎಂಬ ಪೋಸ್ಟರ್ ಬಿಡುಗಡೆ ಮಾಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮಖಪ್ಪ, ಡಾ.ಜಿ.ಡಿ ರಾಘವನ್, ಹಾಗೂ ವಿವಿಧ ಪ್ರಥಾಮಿಕ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.