SUDDIKSHANA KANNADA NEWS/ DAVANAGERE/ DATE:07-04-2025
ದಾವಣಗೆರೆ: ಶುದ್ದ ಕುಡಿಯುವ ನೀರು ಪೂರೈಕೆಯಿಂದ ನೀರಿನಿಂದ ಬರುವ ಅನೇಕ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ 24*7 ಕುಡಿಯುವ ನೀರು ಪೂರೈಕೆಯ ಗ್ರಾಮವನ್ನಾಗಿ ಕನಗೊಂಡನಹಳ್ಳಿ ಜಿಲ್ಲೆಯ ಎರಡನೇ ಗ್ರಾಮವಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ದಾವಣಗೆರೆ ತಾಲ್ಲೂಕಿನ ಕನಗೊಂಡನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ಗ್ರಾಮೀಣ ನೀರು, ನೈರ್ಮಲ್ಯ ವಿಭಾಗ, ಜಲಜೀವನ್ ಮಿಷನ್, ಕರ್ನಾಟಕ ಸುಸ್ಥಿರ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಕಾರ್ಯಾಚರಣೆ ನಿರ್ವಹಣೆ ಸಾಂಸ್ಥೀಕರಣದ ಬಲವರ್ಧನೆ ಅಂಗವಾಗಿ 24*7 ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ನೀಡಿ ಸಮಾರಂಭದಲ್ಲಿ ಮಾತನಾಡಿದರು.
ನಿರಂತರ ಕುಡಿಯುವ ನೀರಿನ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುವ ಜೊತೆಗೆ ಶುದ್ದತೆಯಿಂದ ಹಲವು ರೋಗಗಳನ್ನು ತಡೆಗಟ್ಟಬಹುದಾಗಿದೆ. ದಿನದ 24 ಗಂಟೆಗಳ ಕಾಲವೂ ನೀರು ಲಭ್ಯವಾಗುವುದರಿಂದ ಇದನ್ನು ಮಿತಬಳಕೆ ಮಾಡಿ ವ್ಯರ್ಥವಾಗಿ ಹೋಗುವ ನೀರನ್ನು ತಡೆಗಟ್ಟಬೇಕು. ಪಂಚಾಯಿತಿ ಹಾಗೂ ಗ್ರಾಮ ನೀರು, ನೈರ್ಮಲ್ಯ ಸಮಿತಿಯಿಂದ ಕಾಲಕಾಲಕ್ಕೆ ನೀರಿನ ಪರೀಕ್ಷೆ ನಡೆಸುವ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಆದ್ದರಿಂದ ಯಾರು ಸಹ ಮನೆಯಲ್ಲಿ ಹೆಚ್ಚಿನ ನೀರು ಸಂಗ್ರಹಣೆ ಮಾಡಿಕೊಂಡು ವ್ಯರ್ಥ ಮಾಡಬಾರದು. ನೀರು ಸಂಗ್ರಹ ಮಾಡಿಕೊಳ್ಳುವುದರಿಂದ ಡೆಂಗ್ಯೂ ಸೇರಿದಂತೆ ಇತರೆ ಕಾಯಿಲೆಗಳಿಗೂ ಕಾರಣವಾಗಬಹುದೆಂದು ಗ್ರಾಮಸ್ಥರಿಗೆ ತಿಳಿಸಿದರು.
ಜಿಲ್ಲೆಯಲ್ಲಿನ 100 ಗ್ರಾಮಗಳಲ್ಲಿ 24*7 ನಿರಂತರ ಕುಡಿಯುವ ನೀರು ಪೂರೈಕೆ ಮಾಡಲು ಗುರಿ ಹೊಂದಲಾಗಿದ್ದು ಬರುವ ಆಗಸ್ಟ್ ಒಳಗಾಗಿ ಈ ಎಲ್ಲಾ ಗ್ರಾಮಗಳಿಗೂ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ನ್ಯಾಮತಿ
ತಾಲ್ಲೂಕಿನ ದಾನಿಹಳ್ಳಿ ಗ್ರಾಮ ಮೊದಲಾಗಿದ್ದು ಕನಗೊಂಡನಹಳ್ಳಿ ಜಿಲ್ಲೆಯ ಎರಡನೇ ಗ್ರಾಮವಾಗಿದ್ದು ಇದು ರಾಜ್ಯದಲ್ಲಿ 15 ನೇ ಗ್ರಾಮವಾಗಿದೆ ಎಂದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಇವರು ಮಾತನಾಡಿ ನೀರು ಮಿತವಾದ ಸಂಪತ್ತು, ನಮ್ಮ ಸ್ವಂತ ವಾಹನವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ನೀತಿಯಲ್ಲಿ ಮನೆಯ ಮುಂದಿನ ಜಾಗವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ನಲ್ಲಿ ಮುರಿದುಹೋದಲ್ಲಿ ಆಯಾ ಮನೆಯವರೇ ಖರೀದಿಸಿ ಅಳವಡಿಸಿಕೊಂಡು ನೀರು ವ್ಯರ್ಥವಾಗಿ ಹರಿಯದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ. ಬಾಟಲಿ ನೀರನ್ನು ಹೆಚ್ಚು ಉಪಯೋಗಿಸದೇ ನಿಮ್ಮ ಮನೆಗೆ ಪೂರೈಕೆ ಮಾಡುವ ಶುದ್ದ ಕುಡಿಯುವ ನೀರನ್ನೇ ಬಳಕೆ ಮಾಡಿರಿ, ಇದರಲ್ಲಿ ಹೆಚ್ಚು ಮಿನರಲ್ಸ್ ಗಳಿರುತ್ತವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಕನಗೊಂಡನಹಳ್ಳಿ ಗ್ರಾಮದಲ್ಲಿ 340 ನಲ್ಲಿಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ರೂ.97 ಲಕ್ಷ ವೆಚ್ಚ ಮಾಡಲಾಗಿದೆ. ಇಲ್ಲಿನ
ನೀರನ್ನು 13 ವಿವಿಧ ಮಾದರಿಯಲ್ಲಿ ಆಗಿಂದಾಗ್ಗೆ ನೀರಿನ ಪರೀಕ್ಷೆ ಮಾಡಿ ಸರಬರಾಜು ಮಾಡಲಾಗುತ್ತದೆ. ಆದ್ದರಿಂದ ನೀರಿನ ಶುದ್ದತೆಯ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದ ಅವರು ನೀರು ನಿರ್ವಹಣೆಯನ್ನು ಸ್ವಸಹಾಯ ಗುಂಪುಗಳೇ ನಿರ್ವಹಣೆ ಮಾಡಲಿವೆ ಎಂದು ಮಾಹಿತಿ ನೀಡಿದರು.
ವಿಶ್ವಬ್ಯಾಂಕ್ ಟಾಸ್ಕ್ ಪೋರ್ಸ್ ನ ಮರಿಯಪ್ಪ ಕುಳ್ಳಪ್ಪ, ಪೀಡ್ ಬ್ಯಾಕ್ ಸಂಸ್ಥೆ ಸಿಇಓ ಅಜಯ್ ಸಿಂಹ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾಕ್ಷಿ ಹಾಗೂ ವಿವಿಧ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.