SUDDIKSHANA KANNADA NEWS/ DAVANAGERE/ DATE:25-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಎದ್ದಿರುವ ಗೊಂದಲಗಳಿಗೆ ಬ್ರೇಕ್ ಬೀಳುತ್ತಾ..? ಇಲ್ಲವೋ ಎಂಬುದು ಈಗ ಕುತೂಹಲ ಕೆರಳಿಸಿದೆ.
ಶಿರಮಗೊಂಂಡನಹಳ್ಳಿಯಲ್ಲಿ ನಡೆದ ಮತ್ತೊಂದು ಸುತ್ತಿನ ಕಾರ್ಯಕರ್ತರ ಸಭೆಯಲ್ಲಿ ಹಲವು ವಿಚಾರಗಳ ಕುರಿತಂತೆ ಚರ್ಚೆಯಾಗಿದೆ. ಅದರಲ್ಲಿಯೂ ದಾವಣಗೆರೆಯ ಬಿಜೆಪಿ ಭೀಷ್ಮ ಎಂದೇ ಕರೆಯಲ್ಪಡುವ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ನಿರ್ಧಾರ ಏನು ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಸಭೆಯ ಬಳಿಕ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಬಿಜೆಪಿ ಈಗ ಘೋಷಿಸಿರುವ ಅಭ್ಯರ್ಥಿ ಬದಲಾವಣೆ ಮಾಡದಿದ್ದರೆ ಸ್ಪರ್ಧೆ ಮಾಡುವ ಕುರಿತಂತೆ ಹೇಳಿಕೆ ನೀಡಿರುವುದು ಸಂಚಲನಕ್ಕೆ ಕಾರಣವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರೋಗ್ಯ ಸರಿ ಇಲ್ಲದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ. ಈಗ ಎಲ್ಲರೂ ಕೆಲಸ ಮಾಡುತ್ತೇವೆ, ಒಟ್ಟಾಗಿ ದುಡಿದು ಗೆಲ್ಲಿಸುತ್ತೇವೆ ಎಂಬ ಭರವಸೆ ನೀಡಿದರೆ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧವಿರುವುದಾಗಿ ಘೋಷಿಸಿದ್ದು, ಮತ್ತಷ್ಟು ಕದನ ಕಣ ರಂಗೇರುವಂತೆ ಮಾಡಿದೆ.
ಈಗ 11 ಜನರು ಇದ್ದೇವೆ. ಈ ಪೈಕಿ ಒಬ್ಬರು ಸ್ಪರ್ಧೆಗೆ ಇಳಿಯಬಹುದು. ಯಾರು ಸ್ಪರ್ಧೆ ಮಾಡಿದರೂ ಗೆಲುವಿಗೆ ಶ್ರಂಿಸೋಣ. ನಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ಕರೆ ನೀಡಿದರು. ಈ ವೇಳೆ ಕಾರ್ಯಕರ್ತರು ನೀವೇ ಮಾತನಾಡಿದರೆ ಹೇಗೆ? ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ವಿನಂತಿಸಿಕೊಂಡರು. ಆಗ ಸ್ವಲ್ಪ ಹೊತ್ತು ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಯ್ತು.
ದಾವಣಗೆರೆ ಜಿಲ್ಲೆಯಲ್ಲಿ ಈ ಹಿಂದೆ ನಾವು ಹೇಳಿದವರಿಗೆ ಹೈಕಮಾಂಡ್ ಮಣೆ ಹಾಕುತಿತ್ತು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಮಾತಿಗೆ ಮನ್ನಣೆ ಸಿಕ್ಕಿಲ್ಲ. ಹೈಕಮಾಂಡ್ ಹೇಳಿದ ಮಾತೆಲ್ಲಾ ಕೇಳಿದ್ದೇವೆ. ತಲೆಯಾಡಿಸಿಕೊಂಡು
ಬಂದಿದ್ದೇವೆ. ಆದ್ರೆ, ಈ ಬಾರಿ ಎಲ್ಲರ ವಿರೋಧದ ನಡುವೆಯೂ ಟಿಕೆಟ್ ಘೋಷಿಸಲಾಗಿದೆ. ಇದು ಬೇಸರ ತಂದಿದೆ ಎಂದು ರವೀಂದ್ರನಾಥ್ ಹೇಳಿದರು.
ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಅವರು ನಮ್ಮ ಸಂಪರ್ಕಕ್ಕೆ ಬರುತ್ತಾರೆ ಹೋಗುತ್ತಾರೆ. ಯಾರೂ ಇಲ್ಲದೇ ಇದ್ದರೂ ಮತ ತೆಗೆದುಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಇದ್ದಾರೆ. ಮತದಾರರ ಬಳಿ ಮತ ಕೇಳುವವರು ನಾವು, ಗೆಲುವಿಗೆ ಹೋರಾಟ ಮಾಡುವವರು ನಾವು. ಕೊನೆಯ ಹಂತದವರೆಗೂ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಇನ್ ಸ್ಟೈಟ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಅವರನ್ನು ಸಂಪರ್ಕ ಮಾಡಲಾಗಿದೆ ಎಂಬ ಕುರಿತಂತೆ ಪ್ರತಿಕ್ರಿಯೆ ನೀಡಿದ ರವೀಂದ್ರನಾಥ್ ಅವರು, ಯಾರೇ ನಮ್ಮ ಸಂಪರ್ಕಕ್ಕೆ ಬಂದರೂ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಆದರೆ ಬಂದವರೆಲ್ಲರನ್ನೂ ಅಭ್ಯರ್ಥಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.