SUDDIKSHANA KANNADA NEWS/ DAVANAGERE/ DATE:05-03-2025
ದಾವಣಗೆರೆ: ಗೋಮಾಳ ಮತ್ತು ಕೆರೆ ಒತ್ತುವರಿ ತೆರವು ಸಂಬಂಧ ಬುಧವಾರ ಭೂಮಾಪಕರು ನಡೆಸಿದ ಅಳತೆಯಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಳತೆ ಮಾಡುವುದನ್ನು ಸ್ಥಗಿತಗೊಳಿಸಿ ವಾಪಸ್ ಕಳುಹಿಸಿದ ಘಟನೆ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
ಕಬ್ಬೂರು ಗ್ರಾಮದ ಸರ್ವೇ ನಂಬರ್ 31-32ರಲ್ಲಿ ಇದ್ದ ಸರ್ಕಾರಿ ಗೋಮಾಳದಲ್ಲಿದ್ದ ಸ್ಮಶಾನದ ವಿರೂಪ, ಅಕ್ರಮವಾಗಿ ಮಣ್ಣು ಸಾಗಾಟ ಮತ್ತು ಪೂರ್ವಜರ ಸಮಾಧಿಗಳನ್ನು, ಅಸ್ಥಿಪಂಜರ ನಾಶ ಮಾಡಿದ್ದು, ಕೆರೆ ಮತ್ತು ಗೋಮಾಳ ಒತ್ತುವರಿ ತೆರವುಗೊಳಿಸಿ, ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರೊ.ಕೃಷ್ಣಪ್ಪ ಸ್ಥಾಪಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ಗ್ರಾಮಸ್ಥರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳು, ಕಬ್ಬೂರು ಗ್ರಾಮದ ಗೋಮಾಳ ರೀ.ಸ.ನಂ.31 ಮತ್ತು 32, ಕೆರೆ ಸ.ನಂ.137 ಜಮೀನನ್ನು ಅಳತೆ ಮಾಡಿ ಹದ್ದುಬಸ್ತ್ಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಭೂಮಾಪಕರು ಗೋಮಾಳ ಮತ್ತು ಕೆರೆಯ ಒತ್ತುವರಿ ಅಳತೆ ಮಾಡಿದರು. ಆದರೆ ಈ ಸಂದರ್ಭದಲ್ಲಿ ಅಳತೆ ಮಾಡುವ ಸಂದರ್ಭದಲ್ಲಿ ವ್ಯತ್ಯಯ ಕಂಡು ಬಂದಿದೆ ಎಂದು ಗ್ರಾಮಸ್ಥರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಇದೇ ಭೂಮಾಪಕರು ಮೂರು ಬಾರಿ ಸರ್ವೆ ಮಾಡಿದ್ದರೂ ಸರಿಯಾಗಿ ಮಾಡುತ್ತಿಲ್ಲ. ಹೀಗಾಗಿ ಡಿಜಿಪಿಎಸ್ ಸರ್ವೇ ಮಾಡಲು ಪಟ್ಟು ಹಿಡಿದರು.
ಬಳಿಕ ಅಳತೆ ಸರಿ ಇದೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದರೂ, ನೀವು ದಾಖಲೆ ಪತ್ರಗಳಲ್ಲಿ ಇರುವಂತೆ ಸರಿಯಾಗಿ ಅಳತೆ ಮಾಡುತ್ತಿಲ್ಲ. ನಿಮ್ಮ ಮನಸಿಗೆ ತಿಳಿದಂತೆ ಅಳತೆ ಮಾಡುತ್ತಿದ್ದೀರಿ ಎಂದು ಅಳತೆ ಮಾಡುವುದನ್ನು ಸ್ಥಗಿತಗೊಳಿಸಿ ಭೂಮಾಪಕರನ್ನು ವಾಪಸ್ ಕಳುಹಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗಂಗಣ್ಣ, ಕುಮಾರಣ್ಣ, ರೇವಣ್ಣ, ಚಂದ್ರಪ್ಪ, ಪ್ರಸನ್ನ, ಗ್ರಾಪಂ ಸದಸ್ಯರಾದ ಕೋಟ್ಯೆಪ್ಪ, ಮಂಜುನಾಥ್, ಮಂಜುನಾಥ್ ವೈ. ಕಬ್ಬೂರು, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಂದುವಾಡ, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಸದಸ್ಯರು ಹಾಗೂ ಬಸವರಾಜ್ ಗೋಶಾಲೆ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.