SUDDIKSHANA KANNADA NEWS/ DAVANAGERE/ DATE:22-02-2025
ಬೆಂಗಳೂರು: ಮುದ್ರಾಂಕ ಶುಲ್ಕವೂ ಹೆಚ್ಚಳ. ಜೊತೆಗೆ ನೌಕರರ ಮೇಲೂ ಅನಗತ್ಯ ಕಿರುಕುಳ. ಇದು ಕರ್ನಾಟಕ ಕಾಂಗ್ರೆಸ್ ಸಾಧನೆ ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಕೊನೆ ಎಂಬುದಿಲ್ಲ. ದಿನನಿತ್ಯವೂ ಸಿದ್ದರಾಮಯ್ಯ ಸರ್ಕಾರ ಮುಷ್ಕರ ಎದುರಿಸುತ್ತಿದೆ. ದಿನಬೆಳಗಾದರೆ ಒಂದೊಂದು ಇಲಾಖೆ ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿದೆ. ಇದೀಗ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘ ಆಸ್ತಿ ದಸ್ತಾವೇಜು ನೋಂದಣಿ ಸೇರಿದಂತೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ. ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮುದ್ರಾಂಕ ಶುಲ್ಕವನ್ನು ಹೆಚ್ಚಿಸಿ ಜನರ ಮೇಲೆ ಹೊರೆ ಹೊರಿಸಿದ್ದು ಮಾತ್ರವಲ್ಲದೆ ಮುದ್ರಾಂಕ ಇಲಾಖೆಯ ನೌಕರರ ಮೇಲೆ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರು ಒಂದೊಮ್ಮೆ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದೇ ಆದಲ್ಲಿ ಜನರು ಹೈರಾಣಾಗಲಿದ್ದಾರೆ. ದೂರದೂರುಗಳಿಂದ ಸರ್ಕಾರಿ ಸೇವೆಗಳಿಗೆಂದೇ ಬರುವ ಜನಸಾಮಾನ್ಯರು ಅಡಕತ್ತರಿಗೆ ಸಿಲುಕಲಿದ್ದಾರೆ, ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಗೆ ಜನಸಮಾನ್ಯರು ಪರಿತಪಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ, ಮುದ್ರಾಂಕ ಶುಲ್ಕ ಹೆಚ್ಚಿಸುವ ನಿಮಗೆ ಮುದ್ರಾಂಕ ಇಲಾಖೆಯ ನೌಕರರ ಸಮಸ್ಯೆ ಏಕೆ ಕಾಣಿಸುತ್ತಿಲ್ಲ? ಎಂದು ಪ್ರಶ್ನಿಸಿದೆ.
ಗಾರ್ಡನ್ ಸಿಟಿ ಸಿಲಿಕಾನ್ ಸಿಟಿ ಬೆಂಗಳೂರನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಡಸ್ಟ್ ಸಿಟಿ ಪಾತ್ಹೋಲ್ ಸಿಟಿಯಾಗಿ ಪರಿವರ್ತನೆ ಮಾಡಿ ಇದೇ ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದೆ ಎಂದು ಕಿಡಿಕಾರಿದೆ.
ರಾಜಧಾನಿಯ ಯಾವುದೇ ರಸ್ತೆಗಳಲ್ಲಿ ಹೋದರು ಯಮರೂಪಿ ಗುಂಡಿಗಳು ವಾಹನ ಸವಾರರ ಜೀವ ತೆಗೆಯಲು ಕಾದು ಕೂತಿವೆ. ಸವಾರರು ಹೆಲ್ಮೆಟ್ ಹಾಕಿದ್ದರೂ ಮೂಗು ಬಾಯಿ ಮುಚ್ಚಿಕೊಂಡು ಓಡಾಡುವ ದುಸ್ಥಿತಿಯನ್ನು ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ತಂದಿಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.