SUDDIKSHANA KANNADA NEWS/ DAVANAGERE/ DATE:17-02-2025
ದಾವಣಗೆರೆ: ಜಗಳೂರು ತಾಲೂಕಿನ ಮಾದರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಒಂದು ದಿನ ಇರುವಾಗಲೇ ಕಳ್ಳರು ದೇವಸ್ಥಾನದಲ್ಲಿ ಹುಂಡಿ ಕಳವು ಮಾಡಿದ ಘಟನೆ ಹಿರೇಮಲ್ಲನಹೊಳೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಾದರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಫೆ. 16ರಿಂದ ಇತ್ತು. ಆದ್ರೆ, ಮುನ್ನಾ ದಿನವೇ ದೇವರು ದೇವಸ್ಥಾನದ ಹುಂಡಿ ಕಳವು ಮಾಡಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ಸುಮಾರು 1 ಲಕ್ಷ ರೂಪಾಯಿಗೂ ಹೆಚ್ಚು ನಗದು ಹಣ ಕಳವು ಮಾಡಲಾಗಿದೆ. ಪ್ರತಿ ವರ್ಷವೂ ಜಾತ್ರೆಗೂ ಮುನ್ನ ಫೆಬ್ರವರಿ ತಿಂಗಳಿನಲ್ಲಿ ಹುಂಡಿಯನ್ನು ತೆರೆದು ಹಣವನ್ನು ಎಣಿಕೆ ಮಾಡಲಾಗುತ್ತದೆ. ಶನಿವಾರ ಹುಂಡಿ ತೆರೆದು ಹಣ ಎಣಿಸಲು ತೀರ್ಮಾನಿಸಲಾಗಿತ್ತು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಳ್ಳರು ರಾತ್ರಿ ಸಮಯದಲ್ಲಿ ದೇವಸ್ಥಾನದ ಮುಂಭಾಗದಲ್ಲಿದ್ದ ಹುಂಡಿ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. ಈ ದೇವಸ್ಥಾನದಲ್ಲಿ ಮೂರನೇ ಬಾರಿಗೆ ಹುಂಡಿ ಕಳವು ಮಾಡಲಾಗಿದೆ. ಆದರೂ ದೇವಸ್ಥಾನದ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸದಿರುವುದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದೊಂದು ತಿಂಗಳಿನಲ್ಲಿ ತಾಲೂಕಿನ ಸಿದ್ದಮ್ಮನಹಳ್ಳಿ, ಅಣಬೂರು ಗೊಲ್ಲರಹಟ್ಟಿ ಗ್ರಾಮದಲ್ಲಿನ ದೇವಸ್ಥಾನಗಳಲ್ಲಿಯೂ ಹುಂಡಿ ಕಳ್ಳತನ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆ ಹಚ್ಚಿ ದೇಗುಲದ ಕಳ್ಳತನಕ್ಕೆ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.