SUDDIKSHANA KANNADA NEWS/ DAVANAGERE/ DATE:09-11-2023
ದಾವಣಗೆರೆ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಹೊಡೆತದಿಂದ ಭತ್ತದ ಬೆಳೆ ನೆಲಕಚ್ಚಿದ್ದು, ರೈತರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಬೆಳೆದ ಬೆಳೆಯೂ ಹೋಯ್ತು, ಮಾಡಿದ ಸಾಲವು ಹೆಚ್ಚಾಯ್ತು ಎಂಬ ಪರಿಸ್ತಿತಿ ನಿರ್ಮಾಣ ಆಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ಬಹಳ ಕಷ್ಟ ಪಟ್ಟು ಜಮೀನುಗಳಿಗೆ ನೀರುಣಿಸಿ ಭತ್ತ ಬೆಳೆದಿದ್ದಾರೆ. ಆದರೆ ಈಗ ಸುರಿದಿರುವ ಮಳೆಯಿಂದ ಗಾಳಿಯ ರಭಸಕ್ಕೆ ಭತ್ತದ ಬೆಳೆ ಉರುಳಿ ನೆಲಕ್ಕೆ ಬಿದ್ದಿದೆ. ನೋಡಲು ಚಾಪೆ
ಹಾಸಿದಂತೆ ಹಾಸಿದೆ. ಇದರಿಂದ ಬಹಳಷ್ಟು ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್
ಒತ್ತಾಯಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಸತೀಶ್ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ ಇದೆ. ತಾಲ್ಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ವಿಪತ್ತು ನಿರ್ವಹಣೆ ಕಾರ್ಯಪಡೆ ಇದೆ. ಇವರೆಡು ಸಮಿತಿಗಳಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಇದ್ದಾರೆ. ಆದರೆ ಇಂತಹ ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಸಮೀಕ್ಷೆ ನಡೆಸಿಲ್ಲ. ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ,
ಸೂಕ್ತ ಪರಿಹಾರ ನೀಡಿ, ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾದ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು.
ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಕಡ್ಲೆಬಾಳ್, ಅರಸಾಪುರ, ಕಕ್ಕರಗೊಳ್ಳ, ಕೋಡಿಹಳ್ಳಿ, ಅವರಗೊಳ್ಳ ಮುಂತಾದ ಗ್ರಾಮಗಳ ರೈತರಿಗೆ ಭತ್ತದ ಬೆಳೆಯೇ ಜೀವನಾಡಿಯಾಗಿದೆ. ಸರ್ಕಾರ ಆವರ್ತ ನಿಧಿಯಲ್ಲಿರುವ ಅನುದಾನ ಬಿಡುಗಡೆ ಮಾಡಿ ಬೆಳೆ ಹಾನಿಯಿಂದ ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡಬೇಕು ಎಂದು ಬಿಜೆಪಿ ಮುಖಂಡ ಕಡ್ಲೇಬಾಳು ಧನಂಜಯ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೀರೇಶ್ ದೊಗ್ಗಳ್ಳಿ, ಕಕ್ಕರಗೊಳ್ಳದ ಕಲ್ಲಿಂಗಪ್ಪ, ಕಡ್ಲೆಬಾಳ್ ಬಸವರಾಜು ಹಳ್ಳಿಕೇರಿ, ಕಲ್ಪನಹಳ್ಳಿ ರೇವಣಸಿದ್ದಪ್ಪ ಮುಂತಾದವರು ಉಪಸ್ಥಿತರಿದ್ದರು.