Home ದಾವಣಗೆರೆ ಅತ್ಯಾಚಾರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪುಗಳಿಗೆ ಸುಪ್ರೀಂ ಕೋರ್ಟ್ ತಪರಾಕಿ: ದೇಶಾದ್ಯಂತ ಹೊಸ ಮಾರ್ಗಸೂಚಿ ಪ್ರಕಟ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಅತ್ಯಾಚಾರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪುಗಳಿಗೆ ಸುಪ್ರೀಂ ಕೋರ್ಟ್ ತಪರಾಕಿ: ದೇಶಾದ್ಯಂತ ಹೊಸ ಮಾರ್ಗಸೂಚಿ ಪ್ರಕಟ!

Share
ಸುಪ್ರೀಂ ಕೋರ್ಟ್
Share

ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸುವಾಗ ನ್ಯಾಯಾಂಗ, ಪೊಲೀಸ್ ಮತ್ತು ಪ್ರಾಸಿಕ್ಯೂಟರ್‌ಗಳು ಅನುಸರಿಸಬೇಕಾದ ನಿಯಮಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಇತ್ತೀಚೆಗೆ ಹೈಕೋರ್ಟ್‌ಗಳು ನೀಡಿದ್ದ ಕೆಲವು ವಿವಾದಾತ್ಮಕ ತೀರ್ಪುಗಳ ಬೆನ್ನಲ್ಲೇ, ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ (NJA) ಸಿದ್ಧಪಡಿಸಿರುವ ಹೊಸ ಕೈಪಿಡಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ.

ಹೈಕೋರ್ಟ್‌ಗಳ ವಿವಾದಾತ್ಮಕ ತೀರ್ಪುಗಳು:

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ. 2025ರ ಮಾರ್ಚ್‌ನಲ್ಲಿ ಅಲಹಾಬಾದ್ ಹೈಕೋರ್ಟ್, ಅಪ್ರಾಪ್ತ ಬಾಲಕಿಯ ಬಟ್ಟೆ ಎಳೆದ ಹಾಗೂ ಲೈಂಗಿಕ ಕಿರುಕುಳ ನೀಡಿದ ಘಟನೆಯನ್ನು “ಅತ್ಯಾಚಾರದ ಯತ್ನ” ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಇದರ ಬೆನ್ನಲ್ಲೇ ಪಟ್ನಾ ಹೈಕೋರ್ಟ್ ಕೂಡ, ಮಹಿಳೆಯ ಬಟ್ಟೆ ಬಿಚ್ಚಿ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕೇವಲ ‘ಮಹಿಳೆಯ ಘನತೆಗೆ ಧಕ್ಕೆ’ (IPC 354) ತರಲಾಗಿದೆ ವಿನಃ ಅತ್ಯಾಚಾರದ ಯತ್ನ ನಡೆದಿಲ್ಲ ಎಂದು ಆರೋಪಿಯನ್ನು ಖುಲಾಸೆಗೊಳಿಸಿತ್ತು.

ಈ ತೀರ್ಪುಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಸ್ವಯಂಪ್ರೇರಿತ (Suo Motu) ಪ್ರಕರಣದ ವಿಚಾರಣೆ ನಡೆಸಿ ಈ ಹೊಸ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ನಿರ್ದೇಶನಗಳು:

ಹೊಸ ಕೈಪಿಡಿ ಕಡ್ಡಾಯ: ಲೈಂಗಿಕ ಅಪರಾಧಗಳ ಪ್ರಕರಣಗಳನ್ನು हाताಳಲು ಸಿದ್ಧಪಡಿಸಲಾದ ಹೊಸ ಮಾರ್ಗಸೂಚಿ ಮತ್ತು ಕೈಪಿಡಿಯನ್ನು ದೇಶದ ಎಲ್ಲಾ ನ್ಯಾಯಾಲಯಗಳು, ಪೊಲೀಸರು ಮತ್ತು ಸರ್ಕಾರಿ ವಕೀಲರು ಕಡ್ಡಾಯವಾಗಿ ಪಾಲಿಸಬೇಕು.

ವೆಬ್‌ಸೈಟ್‌ಗಳಲ್ಲಿ ಪ್ರಕಟಣೆ: ನ್ಯಾಯಾಂಗ ಸೂಕ್ಷ್ಮತೆಯ ಕುರಿತಾದ ಈ ವರದಿಯನ್ನು ಸುಪ್ರೀಂ ಕೋರ್ಟ್, ಎಲ್ಲಾ ರಾಜ್ಯಗಳ ಹೈಕೋರ್ಟ್‌ಗಳು ಮತ್ತು ಜಿಲ್ಲಾ ನ್ಯಾಯಾಲಯಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಅಪ್‌ಲೋಡ್ ಮಾಡಬೇಕು.

ಪೊಲೀಸ್ ಠಾಣೆಗಳಿಗೆ ಸೂಚನೆ: ಎಲ್ಲಾ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು (DGP) ಮತ್ತು ಪ್ರಾಸಿಕ್ಯೂಷನ್ ನಿರ್ದೇಶಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಈ ಕೈಪಿಡಿಯನ್ವಯವೇ ಎಫ್‌ಐಆರ್ (FIR) ಮತ್ತು ಚಾರ್ಜ್‌ಶೀಟ್ ದಾಖಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.

ಕಾನೂನಿನ ಗೊಂದಲಕ್ಕೆ ತೆರೆ:

ಸಾಮಾನ್ಯವಾಗಿ ಅತ್ಯಾಚಾರದ ಯತ್ನ ನಡೆದಾಗ ಕೆಳಹಂತದ ನ್ಯಾಯಾಲಯಗಳು ಕೇವಲ ದೈಹಿಕ ಸಂಪರ್ಕದ ಯತ್ನದ ಪುರಾವೆಗಳನ್ನು ಹುಡುಕುತ್ತವೆ. ಆದರೆ, ಆರೋಪಿಯು ಅಪರಾಧ ಎಸಗುವ ಸ್ಪಷ್ಟ ಉದ್ದೇಶದೊಂದಿಗೆ ಮುನ್ನುಗ್ಗಿದ್ದಲ್ಲಿ ಮತ್ತು ಯಾವುದೇ ಬಾಹ್ಯ ಕಾರಣಗಳಿಂದ ಆ ಕೃತ್ಯ ಪೂರ್ಣಗೊಳ್ಳದಿದ್ದಲ್ಲಿ ಅದನ್ನು “ಅತ್ಯಾಚಾರದ ಯತ್ನ” ಎಂದೇ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಸ್ಪಷ್ಟಪಡಿಸಿತ್ತು. ಸದ್ಯ ಸುಪ್ರೀಂ ಕೋರ್ಟ್‌ನ ಈ ಹೊಸ ಗೈಡ್‌ಲೈನ್ಸ್ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ದೇಶಾದ್ಯಂತ ದೊಡ್ಡ ನೆರವಾಗಲಿದೆ ಎನ್ನಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles