SUDDIKSHANA KANNADA NEWS/DAVANAGERE/DATE:13_10_2025
ದಾವಣಗೆರೆ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಬಿ. ಎಸ್ಸಿ. ಅರಣ್ಯ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಕರ್ನಾಟಕ ಅರಣ್ಯ ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ಸದಸ್ಯರು ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
READ ALSO THIS STORY: ರೈಲ್ವೆ ನೇಮಕಾತಿ ಮಂಡಳಿಯ ಜೂನಿಯರ್ ಎಂಜಿನಿಯರ್ ನೇಮಕ: 2570 ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಆಹ್ವಾನ
ವೃತ್ತಿಪರ (ಅರಣ್ಯಶಾಸ್ತ್ರ) ಪದವೀಧರರ ಸಾಮರ್ಥ್ಯ ಮತ್ತು ಅಗತ್ಯವನ್ನು ಅರಿತುಕೊಂಡ ಕರ್ನಾಟಕ ಸರ್ಕಾರವು 2003ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇಕಡ 50ರಷ್ಟು ಮೀಸಲಾತಿಯನ್ನು ಒದಗಿಸಿದ ನಂತರ 2012 ರಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇಕಡ 75ರಷ್ಟು ಹೆಚ್ಚಿಸಲಾಯಿತು. ತಿದ್ದುಪಡಿ ನಿಯಮಗಳ ಅಡಿಯಲ್ಲಿ, 2018ರಲ್ಲಿ ಪ್ರಸ್ತಾಪಿಸಲಾದ ಹೊಸ ಕರಡು ನಿಯಮಗಳು, ಬಿ.ಎಸ್ಸಿ ಅರಣ್ಯಶಾಸ್ತ್ರ ಪದವೀಧರರಿಗೆ ವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಮೊದಲು ಶೇಕಡ 75ರಷ್ಟಿದ್ದ ಮೀಸಲಾತಿಯನ್ನು ಶೇಕಡ 50ಕ್ಕೆ ಕಡಿಮೆಗೊಳಿಸಲಾಗಿದೆ. ಇದು ಅರಣ್ಯಶಾಸ್ತ್ರ ಪದವೀಧರರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಮನವಿಯಲ್ಲಿ
ವಿವರಿಸಲಾಗಿದೆ.
ರಾಜ್ಯ ಸರ್ಕಾರವು ಕಡಿತಗೊಳಿಸಿದ ಆದೇಶ ವಿರುದ್ಧ ಮತ್ತು ಟಿ. ಎಂ. ವಿಜಯ್ ಭಾಸ್ಕರ್ ಅವರು ಉಪ ವಲಯ ಅರಣ್ಯಾಧಿಕಾರಿಯ ಹುದ್ದೆಯ ನೇರ ನೇಮಕಾತಿಯನ್ನು ತೆಗೆದು ಶೇ100 ರಷ್ಟು ಹುದ್ದೆಗಳನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಬೇಕೆಂಬುದರ ಕುರಿತಾಗಿ ಸಲ್ಲಿಸಿದ್ದ 6ನೇಯ ಆಡಳಿತ ಸುಧಾರಣೆ ವರದಿಯ ಅಧ್ಯಾಯ 4ರ ಅಧಿಸೂಚನೆ ಸಂಖ್ಯೆ 81ನ್ನು ವಜಾಗೊಳಿಸುವಂತೆ ಈ ಹಿಂದೆ 2024 ರಲ್ಲಿ ಪ್ರತಿಭಟಿಸಲಾಗಿತ್ತು. ಆಗಿನ ರಾಜ್ಯ ಸರ್ಕಾರವು ವಿಶೇಷ ಸಮಿತಿ ರಚಿಸುವುದರ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಈವರೆಗೆ ರಾಜ್ಯ ಸರ್ಕಾರದಿಂದಾಗಲಿ ಅಥವಾ ರಚಿಸಿದ ಸಮೀತಿಯಿಂದಾಗಲಿ ಯಾವುದೇ ರೀತಿಯ ವರದಿ ಅಥವಾ ಅಧಿಸೂಚನೆಗಳು ಹೊರಬಂದಿಲ್ಲ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವೀಧರರನ್ನೇ ನೇರ ನೇಮಕಾತಿ ಮಾಡುವುದರ ಮೂಲಕ ಅರಣ್ಯಶಾಸ್ತ್ರದಲ್ಲಿ ವಿಷೇಶ ಪರಿಣಿತಿ ಹೊಂದಿರುವ ಪದವೀಧರರ ಜ್ಞಾನ ಮತ್ತು ಅನುಭವವನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರವು ಮುಂದಾಗಬೇಕು ಎಂದು ಒತ್ತಾಯಿಸಲಾಗಿದೆ.
ಅರಣ್ಯಶಾಸ್ತ್ರ ಸೇರುವವರು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು, ಕರ್ನಾಟಕ ಪರೀಕ್ಷಾ ಪ್ರಾಧೀಕಾರ ನಡೆಸುವ ಸಿ.ಇ.ಟಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳು ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವಿಯನ್ನೇ ಬೇರೆ ವಿಷಯಗಳಿಗಿಂತ ಹೆಚ್ಚು ಆಸಕ್ತಿಯಿಂದ ಆಯ್ಕೆ ಮಾಡಿಕೊಳ್ಳುತ್ತಿರುವುದು, ಪ್ರತಿಭಾವಂತ ವಿದ್ಯಾರ್ಥಿಗಳೇ ಈ ಕ್ಷೇತ್ರಕ್ಕೆ ಬರುತ್ತಿರುವುದು ಈ ಪದವಿಯ ವ್ಯಾಸಂಗದ ಮಹತ್ವವನ್ನು ಸೂಚಿಸುತ್ತದೆ. ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಸದರಿ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರಿಗೆ ಮೊದಲು ನೀಡಿದ್ದ ಶೇ.75 ರಷ್ಟು ಮೀಸಲಾತಿಯನ್ನು ಶೇ.50ಕ್ಕೆ ಕಡಿತಗೊಳಿಸಿರುವುದು ಅನ್ಯಾಯ. ಇದರಿಂದ ಅರಣ್ಯ ನಿರ್ವಹಣೆಗೆ ಬೇಕಾದ ತಾಂತ್ರಿಕ ಪರಿಣಿತಿ ಕ್ಷೀಣಗೊಳ್ಳಲಿದೆ ಎಂದು ತಿಳಿಸಲಾಗಿದೆ.
ಅರಣ್ಯಶಾಸ್ತ್ರವು ಒಂದು ವಿಶೇಷ ಕ್ಷೇತ್ರವಾಗಿದ್ದು, ಅರಣ್ಯ ಪರಿಸರಶಾಸ್ತ್ರ, ಜೀವವೈವಿಧ್ಯ ಸಂರಕ್ಷಣೆ, ವೃಕ್ಷಶಾಸ್ತ್ರ ವಿಧಾನಗಳು, ವನ್ಯಜೀವಿ ನಿರ್ವಹಣೆ, ಹವಾಮಾನ ಬದಲಾವಣೆ ತಡೆಗೆ ಅರಣ್ಯ ನಿರ್ವಹಣೆ, ಅರಣ್ಯ ಸಂಪತ್ತು ಬಳಕೆ ಹಾಗೂ ಸಾಮಾಜಿಕ ಅರಣ್ಯ ನಿರ್ವಹಣೆ ಮುಂತಾದ ವಿವಿಧ ಕರ್ತವ್ಯಗಳನ್ನು ಒಳಗೊಂಡಿರುತ್ತದೆ. ಈ ವಿಭಾಗದ ಜಟಿಲತೆಯನ್ನು ಸಮರ್ಥವಾಗಿ ನಿರ್ವಹಿಸಲು ನಿರ್ದಿಷ್ಟ ಅರಣ್ಯ ಶಿಕ್ಷಣ ಮತ್ತು ತರಬೇತಿ ಹೊಂದಿರುವ ಅಭ್ಯರ್ಥಿಗಳೇ ಅಗತ್ಯ ಹಾಗೂ ರಾಷ್ಟ್ರೀಯ ಅರಣ್ಯ ನೀತಿ (1998) ಕೂಡ ಇದನ್ನು ಶಿಫಾರಸ್ಸು ಮಾಡುತ್ತದೆ. ಕರ್ನಾಟಕ ಸರ್ಕಾರ ಕೃಷಿ ವಿಶ್ವವಿದ್ಯಾಲಯಗಳ ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳಿಂದ ಪದವಿ ಪಡೆದವರಿಗೆ ಅವರ ಶೈಕ್ಷಣಿಕ ಅರ್ಹತೆಗೆ ನೇರವಾಗಿ ಸಂಬಂಧಿಸಿದ ಇಲಾಖೆಗಳಲ್ಲಿ ನೇರ ನೇಮಕಾತಿಯಲ್ಲಿ ಶೇ 100 ರಷ್ಟು ಮೀಸಲಾತಿಯನ್ನು ಆಯಾ ಇಲಾಖೆಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸಲು ಒದಗಿಸಿದೆ ಎಂದು ಮಾಹಿತಿ ನೀಡಲಾಗಿದೆ.
ಸಹಾಯ ಕೃಷಿ ಅಧಿಕಾರಿ (ಬಿ.ಎಸ್ಸ್ಸಿ. ಕೃಷಿ), ಸಹಾಯಕ ತೋಟಗಾರಿಕಾ ಅಧಿಕಾರಿ (ಬಿ.ಎಸ್ಸ್ಸಿ. ತೋಟಗಾರಿಕೆ), ಪಶುವೈದ್ಯ ಅಧಿಕಾರಿ (ಬಿ.ವಿ.ಎಸ್ಸ್ಸಿ) ಹಾಗೂ ಸಹಾಯ ರೇಷ್ಮೆ ಅಧಿಕಾರಿ (ಬಿ.ಎಸ್ಸ್ಸಿ. ರೇಷ್ಮೆ) ಇದೇ ನಿಟ್ಟಿನಲ್ಲಿ ಅರಣ್ಯ ಪದವೀಧರರ ಅವಶ್ಯಕತೆ ಮತ್ತು ಉಪಯುಕ್ತತೆಯನ್ನು ಗುರುತಿಸಿ ತಮಿಳುನಾಡು, ತೆಲಂಗಾಣ, ಕೇರಳ, ಒರಿಸ್ಸಾ, ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್ ನಂತಹ ಇತರೆ ರಾಜ್ಯಗಳು ಸಹ ತಮ್ಮ ಅರಣ್ಯ ಇಲಾಖೆಗಳಲ್ಲಿ ಮೀಸಲಾತಿಯನ್ನು ಒದಗಿಸಿದೆ. ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ, ಅರಣ್ಯ ಪದವೀಧರ ವಿದ್ಯಾರ್ಥಿಗಳ ವೃತ್ತಿ ಜೀವನ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಲ್ಲಿ ಬಿ.ಎಸ್ಸಿ (ಅರಣ್ಯಶಾಸ್ತ್ರ)ವನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಿ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.