SUDDIKSHANA KANNADA NEWS/ DAVANAGERE/ DATE:17-02-2025
ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯವರು ರಸ್ತೆ ಕಾಮಗಾರಿಯ ವೇಳೆ ಅಂಡರ್ ಪಾಸ್ ಚಿಕ್ಕದಾಗಿ ಕಟ್ಟಿದ್ದಾರೆ ಎಂದು ಊರಿನವರು ಹೋರಾಟ ಮಾಡುತ್ತಿರುವಿರಿ. ಶಾಮನೂರು ಬಡಾವಣೆಯವರು ಹೋರಾಟ ಮಾಡಿದ ಫಲವಾಗಿ ಉತ್ತಮ ಅಂಡರ್ ಪಾಸ್ ರಸ್ತೆ ನಿರ್ಮಾಣವಾಗಿದೆ. ಅಧಿಕಾರಿಗಳು ಮಾತು ಕೇಳಬೇಕು ಎಂದರೆ ಹೋರಾಟವು ಅಗತ್ಯವಾಗಿದೆ. ಇಲ್ಲವಾದಲ್ಲಿ ಅಧಿಕಾರಿಗಳು ಮಾತು ಕೇಳುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಲಹೆ ನೀಡಿದರು.
ದಾವಣಗೆರೆಯ ಹಳೇ ಕುಂದವಾಡ ಗ್ರಾಮದಲ್ಲಿನ ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟನೆ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಂಜನೇಯ ಸ್ವಾಮಿ, ಬಸವೇಶ್ವರ ದೇವರ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ನಿಮ್ಮೆಲ್ಲರ ಹೋರಾಟಕ್ಕೆ ನಮ್ಮ ಬೆಂಬಲವು ಇದೆ ಎಂದರು.
ಹೆದ್ದಾರಿ ಅಧಿಕಾರಿಗಳ ಜೊತೆ ಸಭೆ ನಡೆಸೋಣ. ಹಳೇಕುಂದವಾಡ, ಹೊಸಕುಂದವಾಡ ಗ್ರಾಮಕ್ಕೆ ಹೋಗಲು ಸೇತುವೆ ಬೇಕು. ನಿಮ್ಮ ಬೇಡಿಕೆ ಈಡೇರಬೇಕಾದರೆ ಹೋರಾಟ ಅಗತ್ಯ. ಹೋರಾಟ ಮುಂದುವರಿಸಿ. ಕೆಲಸ ಮಾಡಲು ಬಿಡಬೇಡಿ. ಆಗ ಹೆದ್ದಾರಿ ಅಧಿಕಾರಿಗಳು ದಾರಿಗೆ ಬರುತ್ತಾರೆ ಎಂದು ಮಲ್ಲಿಕಾರ್ಜುನ್ ತಿಳಿಸಿದರು.
ಎಲ್ಲರೂ ಒಗ್ಗಟ್ಟಿನಿಂದ ಹೋದರೆ ಎಂಥ ಸಮಸ್ಯೆ ಇದ್ದರೂ ಪರಿಹಾರ ಆಗುತ್ತೆ. ಸಾಧಿಸಲಾಗುವುದಿಲ್ಲ ಎಂದುಕೊಂಡರೂ ಈಡೇರುತ್ತದೆ. ಹಾಗಾಗಿ, ಹಳೇಕುಂದವಾಡ ಗ್ರಾಮಸ್ಥರು ಒಟ್ಟಾಗಿ ಹೋಗಿ. ಏನೇ ಸಮಸ್ಯೆ ಇದ್ದರೂ ಹೇಳಿ. ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನೆನೆಗುದಿಗೆ ಬಿದ್ದಿದ್ದ ಹಳೇ ಕುಂದುವಾಡದ ಆಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ಈಗ ಕಾಯಕಲ್ಪ ಕೂಡಿ ಬಂದಿದ್ದು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡೆದಿವೆ. ಈ ಹಿಂದೆ ನಗರ ಪ್ರದೇಶಕ್ಕೆ ಕುಡಿಯುವ ನೀರಿನ
ಕೆರೆ ನಿರ್ಮಾಣ ಮಾಡುವಾಗಲು ತೊಡಕುಗಳು ಬಂದಿದ್ದವು, ಆಗ ಹಳೇ ಕುಂದುವಾಡ ಹಿರಿಯ ಗ್ರಾಮಸ್ಥರು ನನ್ನ ಬೆನ್ನು ತಟ್ಟಿ ಬೆಂಬಲಿಸಿದ್ದರಿಂದ ಈಗ ಕುಡಿಯುವ ಬೃಹತ್ ಘಟಕ ನಿರ್ಮಾಣ ಆಗಿದೆ. ಹೊಸ ಕುಂದವಾಡ ಗ್ರಾಮಕ್ಕೆ ಕೆರೆ ಏರಿ ಮೇಲೆ
ಹೋಗಲು ರಸ್ತೆ ನಿರ್ಮಾಣ ಮಾಡಬೇಕಿದೆ. ಆದ್ರೆ, ಕೋರ್ಟ್ ಗೆ ಕೆಲವರು ಹೋಗಿದ್ದರಿಂದ ತಡೆಯಾಗಿದೆ. ಗ್ರಾಮಸ್ಥರೆಲ್ಲರೂ ಸೇರಿ ಕೇಸ್ ವಾಪಸ್ ಪಡೆಯುವಂತೆ ಮನವೊಲಿಸಿ. ಆ ಬಳಿಕ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿ ಅಭಿವೃದ್ಧಿಪಡಿಸಲು ನಿಮ್ಮ ಸಹಕಾರ ಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಬಡವರ ಪಕ್ಷವಾಗಿದೆ, ದೀನ ದಲಿತರ, ದಮನಿತರ ಅಭಿವೃದ್ಧಿಗೆ ಉತ್ತಮ ಕಾರ್ಯಗಳು ಪಕ್ಷದಿಂದ ನಡೆಯುತ್ತಿವೆ. ಅಭಿವೃದ್ಧಿ ಕಾರ್ಯಗಳಿಗೆ ಕುಂದುವಾಡ ಸೇರಿದಂತೆ ಪ್ರತಿಯೊಬ್ಬರ ಸಹಕಾರವಿರಲಿ ಎಂದರು.
ಈ ವೇಳೆ ಶ್ರೀಗಳು, ಹಳೇ ಕುಂದುವಾಡ ಬಡಾವಣೆಯ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮಸ್ಥರು ಇತರರು ಇದ್ದರು.