SUDDIKSHANA KANNADA NEWS/ DAVANAGERE/ DATE:11-01-2024
ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಆಟೋ ಚಾಲಕರು ಹಾಗೂ ಮಾಲೀಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲಾ ಆಟೋ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳ ಪಾಲಿಸಬೇಕು. ಆಟೋ ಚಾಲಕರ ಹಾಗೂ ಮಾಲೀಕರ ಸಮಸ್ಯೆಗಳನ್ನು ಪೊಲೀಸ್ ಪರಿಮಿತಿಯಲ್ಲಿ ಆಗುವಂತಹ ಎಲ್ಲಾ ಪರಿಹಾರಗಳನ್ನು ಒದಗಿಸಲಾಗುವುದು. ಹಲವು ಆಟೋ ಡ್ರೈವರ್ ಗಳು ತಮ್ಮ ಪ್ರಾಮಾಣಿಕತೆ ಮೆರೆದಿದ್ದು, ಇತ್ತೀಚಿಗೆ ಹಲವಾರು ಆಟೋ ಚಾಲಕರು ಪ್ರಯಾಣಿಕರು ಆಟೋದಲ್ಲಿ ಪ್ರಯಾಣಿಸುವಾಗ ಬಿಟ್ಟು ಹೋದಂತಹ ವಸ್ತುಗಳನ್ನು ಮರಳಿಸಿ ಪ್ರಾಮಾಣಿಕತೆ ತೋರಿದ್ದಾರೆ. ಇದು ಸಂತಸದ ವಿಚಾರ ಎಂದರು.
ಎಲ್ಲಾ ನಗರಗಳಲ್ಲೂ ಆಟೋ ಚಾಲಕರನ್ನು ಸಾಂಸ್ಕೃತಿಕ ಪರಿವಾಚಕರು ಎಂದು ಹೇಳಲಾಗುತ್ತದೆ. ಯಾಕೆಂದರೆ ನಗರದ ಬಗ್ಗೆ ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡುವವರು ಚಾಲಕರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಸಂತೋಷ್, ಮಂಜುನಾಥ ಜಿ, ಡಿವೈಎಸ್ಪಿಗಳಾದ ಬಸವರಾಜ್ ಬಿ. ಎಸ್., ಪ್ರಕಾಶ್ ಪಿ. ಬಿ., ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ನಲವಾಗಲು, ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಆಟೋ ಚಾಲಕರ ಸಂಘದ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಕೊಟ್ರೇಶಪ್ಪ, ಮಂಜುನಾಥ, ಮಾರುತಿ, ಆಟೋ ಚಾಲಕರು – ಮಾಲೀಕರು ಉಪಸ್ಥಿತರಿದ್ದರು.