SUDDIKSHANA KANNADA NEWS/ DAVANAGERE/ DATE:19-09-2024
ದಾವಣಗೆರೆ: ದಾವಣಗೆರೆ ನಗರದ ವೆಂಕೋಬ ಕಾಲೋನಿಯ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಯಾಕಾಯ್ತು ಎಂಬ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.
ಘಟನೆ ಸಂಬಂಧ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ವೆಂಕೋಬಾ ಕಾಲೋನಿಯ ಗಣೇಶ ಮೆರವಣಿಗೆಯು ನಡೆಯುತಿತ್ತು. ಅರಳಿಮರ ವೃತ್ತದಿಂದ ಚಾಮರಾಜಪೇಟೆ ಸರ್ಕಲ್ ಬಳಿ ಬರುತ್ತಿದ್ದಂತೆ ನಾಲ್ಕು ಕಲ್ಲು ಬಿದ್ದಿವೆ. ಕೂಡಲೇ ನಾವು ಡಿಜೆ ಬಂದ್ ಮಾಡಿಸಿದೆವು. ಆಗ ಇದ್ದಕ್ಕಿದ್ದಂತೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಆಗಿದ್ದು, ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ ಎಂದು ಹೇಳಿದರು.
ವೆಂಕೋಬ ಕಾಲೋನಿಯ ಗಣೇಶ ಮೂರ್ತಿ ವಿಸರ್ಜನೆ ಆಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪರಿಸ್ಥಿತಿ ಶಾಂತಿ ಇದೆ. ಯಾರೇ ತಪ್ಪು ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಪರಿಶೀಲನೆ ನಡೆಸುತ್ತಿದ್ದು, ಕಠಿಣ ಕ್ರಮ ಜರುಗಿಸುತ್ತೇವೆ. 144 ಸೆಕ್ಷನ್ ಜಾರಿಗೊಳಿಸುತ್ತೇವೆ. ಜಿಲ್ಲಾಧಿಕಾರಿ ಜೊತೆ ಈಗಾಗಲೇ ಮಾತನಾಡಿದ್ದೇನೆ ಎಂದರು.
ಬುಧವಾರದಂದು ಪ್ರಚೋದನಕಾರಿ ಭಾಷಣ ಮಾಡಿದ್ದೇ ಘಟನೆಗೆ ಕಾರಣ. ಈ ಸಂಬಂಧ ಪ್ರಕರಣ ದಾಖಲಿಸಿದ್ದೇವೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಯಾರ್ಯಾರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ವೈರಲ್ ಮಾಡಿದ್ದಾರೆಯೋ ಅವರ ವಿರುದ್ಧವೂ ನಿರ್ದಾಕ್ಷಿಣ ಕ್ರಮ ಆಗುತ್ತದೆ ಎಂದು ತಿಳಿಸಿದರು.
ಕಲ್ಲು ತೂರಾಟ ಪ್ರಕರಣ ಸಂಬಂಧ ಎರಡೂ ಗುಂಪಿನವರ ವಿರುದ್ಧವೂ ಕೇಸ್ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದ ಬಗ್ಗೆ ಕೇಸ್ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. ಈ ಘಟನೆ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ. ಎಷ್ಟು
ಮಂದಿಗೆ ಗಾಯವಾಗಿದೆ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದರು.
ಪರಿಸ್ಥಿತಿ ಶಾಂತಿಯುತವಾಗಿದೆ. ಅಧಿಕಾರಿಗಳು, ಸಿಬ್ಬಂದಿ ರೌಂಡ್ಸ್ ನಲ್ಲಿದ್ದಾರೆ. ಎಲ್ಲಾ ಸಿಬ್ಬಂದಿ, ಅಧಿಕಾರಿಗಳು ಸಾಕಷ್ಟಿದ್ದಾರೆ. ಎಲ್ಲಾ ಕಡೆ ಇದ್ದೆವು. ಗಲಾಟೆ ಶುರುವಾಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದೇವೆ. ಸದ್ಯಕ್ಕೆ ಯಾವುದೇ ಭೀತಿ
ಇಲ್ಲ. ಎಲ್ಲೆಡೆ ಹದ್ದಿನ ಕಣ್ಣು ಇಡಲಾಗಿದೆ ಎಂದು ಉಮಾ ಪ್ರಶಾಂತ್ ತಿಳಿಸಿದರು.