SUDDIKSHANA KANNADA NEWS/ DAVANAGERE/ DATE:09-08-2024
ದಾವಣಗೆರೆ: ಸುಳ್ಳು ಆರೋಪ ಬಿಡಿ. ಸತ್ಯ ತಿಳಿದು ಮಾತನಾಡಿ, ವಿನಾಕಾರಣ ಆರೋಪ ಮಾಡಿದರೆ ಯಾರೂ ನಂಬುವುದಿಲ್ಲ. ಸತ್ಯದ ಮೂನ್ನು ಅರಿತು ಮಾತನಾಡಿ ಎಂದು ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಖಡಕ್ ಸಂದೇಶ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸಮೀಪದ ಕೊಳಹಾಳು ಗ್ರಾಮದಲ್ಲಿ ಗುರುವಾರ ಜರುಗಿದ ಶ್ರೀ ಬಸವೇಶ್ವರಸ್ವಾಮಿ ನೂತನ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾವು ಮತ್ತು ತಮ್ಮ ಪೂರ್ವಾಶ್ರಮದ ಆಸ್ತಿಯ ವಿಚಾರದ ಬಗ್ಗೆ ವಿವರವಾಗಿ ಹೇಳಿದರು.
“ನಮ್ಮ ಪೂರ್ವಾಶ್ರಮದ ತಾಯಿ ಗಂಗಮ್ಮ ಪತಿಯ ನಿಧನದ ನಂತರ 3 ಜನ ಹೆಣ್ಣುಮಕ್ಕಳ ಜತೆ ಎಲ್ಲ ಶಿಷ್ಯರಂತೆ ಸದ್ಧರ್ಮ ನ್ಯಾಯಪೀಠಕ್ಕೆ ಬಂದು ಆಸ್ತಿವಿಭಾಗ ಮಾಡಿಕೊಡಲು ಕೇಳಿಕೊಂಡರು. ನಾವು ಎಲ್ಲಾ ಆಸ್ತಿಯನ್ನು 3 ಜನ ಸಹೋದರಿಯರಿಗೆ ಹಂಚಿದೆವು. ನಾವಂತೂ ಸಂಬಂಧದಿಂದ ದೂರವಾಗಿ ಮಠಕ್ಕೆ ನಮ್ಮನ್ನು ಅರ್ಪಿಸಿಕೊಂಡಿದ್ದೇವೆ. ಅವರಿಗೆ ನಾವೊಬ್ಬರೇ ಮಗ. ತಾಯಿಯ ಜೀವನಾಂಶಕ್ಕಾಗಿ 3 ಜನ ಸಹೋದರಿಯರಿಗೆ ತಲಾ 1 ಲಕ್ಷವನ್ನು ತಾಯಿಯ ಹೆಸರಿನಲ್ಲಿ ಶಿವಮೊಗ್ಗದ ಬ್ಯಾಂಕ್ ನಲ್ಲಿಡಬೇಕೆಂದು ಆಜ್ಞಾಪಿಸಿದವು” ಎಂದರು.
ತಾಯಿ ಮರಣದ ನಂತರ 3 ಜನ ಸಹೋದರಿಯರು ಬ್ಯಾಂಕ್ ನಲ್ಲಿರುವ ಹಣಕ್ಕೆ ತಾಯಿ ತಮ್ಮನ್ನು ನಾಮಿನಿ ಆಗಿ ಮಾಡಿದ್ದಾರೆ. ಆದ ಕಾರಣ ಈ ಹಣ ತಮಗೆ ಸೇರಬೇಕೆಂದು ದಾಖಲೆ ನೀಡಿದರು. ಈಗ ಆ 3 ಲಕ್ಷ ರೂ. ಹಣ ನಮ್ಮ ನ್ಯಾಯಪೀಠದಲ್ಲಿದೆ. ಅದು ಮಠಕ್ಕೆ ಸಲ್ಲುತ್ತದೆ ಎಂದರು.
”ನಮ್ಮ ಪೂರ್ವಾಶ್ರಮದ ತಾಯಿ ಗಂಗಮ್ಮ ವೃದ್ಧಾಪ್ಯದಲ್ಲಿ ಬೆಂಗಳೂರು ಕೇಂದ್ರದಲ್ಲಿ ನಮ್ಮ ದರ್ಶನಕ್ಕಾಗಿ ಬಂದು ಕಾಣಿಕೆ ನೀಡಿದ್ದಲ್ಲದೆ ನಮಗೆ 25 ಸಾವಿರ ರೂ. ಕೊಟ್ಟರು. ನಾವು ಏಕೆ ಅಂತ ಕಾರಣ ಕೇಳಿದಾಗ ಚಿಕಿತ್ಸೆಗೆಂದು ಮಣಿಪಾಲ್ ಆಸ್ಪತ್ರೆಗೆ ಸೇರಿದಾಗ ನನ್ನ ಅಳಿಯ ತರಳಬಾಳು ಕೇಂದ್ರದಿಂದ ಕೈಗಡವಾಗಿ ಹಣವನ್ನು ಪಡೆದ ವಿಷಯ ನನಗೆ ತಿಳಿಯಿತು. ನಾನು ಮಠದ ಋಣದಲ್ಲಿ ಸಾಯಬಾರದೆಂದು ಮರುಪಾವತಿ ಮಾಡಲು ಬಂದಿದ್ದೇನೆ” ಎಂದು ಹೇಳಿ ಮಠದ ಹಣವನ್ನು ಹಿಂತಿರುಗಿಸಿದರು ಎಂದು ಸ್ಪಷ್ಟನೆ ನೀಡಿದರು.
ತಮಗೆ ಆಸ್ತಿ ಮಠ ಹಾಗೂ ಭಕ್ತರೇ ವಿನಃ ಸಂಬಂಧಿಗಳಲ್ಲ, ಯಾರಿಗೂ ಸಹ ಮಠದ ಆಸ್ತಿಯನ್ನು ನೀಡಿಲ್ಲ. ಎಷ್ಟೋ ಜನರಿಗೆ ಮಠದಿಂದ ಸಹಾಯ ಮಾಡಿದ್ದೇವೆ. ಆದರೆ ನಮ್ಮನ್ನು ಹೆತ್ತುಹೊತ್ತು ಸಾಕಿದ ತಾಯಿಗೆ ಸಹಾಯ ಮಾಡಲಾಗಲಿಲ್ಲ. ಅವರೂ ಸಹ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.