SUDDIKSHANA KANNADA NEWS/ DAVANAGERE/ DATE:30-08-2024
ದಾವಣಗೆರೆ: ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ಸಾಧು ಸದ್ಭರ್ಮ ಭಕ್ತರ ಸಭೆ ನಡೆಸಿ ನೂತನ ಪೀಠಾಧಿಪತಿಯಾಗಬೇಕು, ಡೀಡ್ ರದ್ದು ಮಾಡಬೇಕು ಎಂಬ ಹೇಳಿಕೆ ನೀಡಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ವಿರುದ್ಧ ಚಿತ್ರದುರ್ಗದ ಸಿರಿಗೆರೆ ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಸಿರಿಗೆರೆಯ ಗುರುಶಾಂತರಾಜ ದೇಶಿಕೇಂದ್ರ ದಾಸೋಹ ಮಂಟಪದಲ್ಲಿ ಆಯೋಜಿಸಲಾಗಿದ್ದ ಹೊಳಲ್ಕೆರೆ, ಚಿತ್ರದುರ್ಗ, ಹರಪನಹಳ್ಳಿಯ ಸಾಧು ವೀರಶೈವ ಸಂಘದ ಭಕ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪರು ಆಡಿದ ಮಾತುಗಳನ್ನು ನಾವು ಕೇಳಿದ್ದೇವೆ. ಅವರ ಮಾತುಗಳು ಅಪೇಕ್ಷಣೀಯ ಅಲ್ಲ, ಇಂಥ ಮಾತುಗಳು ಅವರ ಘನತೆಗೆ ತಕ್ಕುದಲ್ಲ ಎಂದು ಸಿಟ್ಟು ಹೊರಹಾಕಿದರು.
ಐದು ವರ್ಷ ಮುಗಿದ ಮೇಲೆ ರಾಜಕಾರಣಿಗಳು ಮಾಜಿಯಾಗುತ್ತಾರೆ. ಆದ್ರೆ, ಮಠಾಧಿಪತಿಗಳು ಮಾಜಿ ಆಗುವುದಿಲ್ಲ. ಅರಮನೆಗಳು ಅಸ್ತಿತ್ವ ಕಳೆದುಕೊಂಡರೂ ಗುರುಮನೆಗಳಿಗೆ ಭಕ್ತರು ತಮ್ಮ ಶ್ರದ್ಧಾಭಕ್ತಿ ತೋರುತ್ತಾರೆ ಎಂದು ಹೇಳುವ ಮೂಲಕ ಛಾಟಿ ಬೀಸಿದರು.