ಬೆಂಗಳೂರು: ಮೀಸಲಾತಿ ಇದ್ದಿದ್ದರೆ ಬಹುಶಃ ನಾನು ಎಂಎಸ್ಸಿ ಓದಿ ಎಲ್ಲೋ ಮೇಷ್ಟ್ರಾಗಿ ಇರುತ್ತಿದ್ದೆ. ಮೀಸಲಾತಿಯಿಲ್ಲದೆ ಇರುವುದರಿಂದ ನಾನು ರಾಜ್ಯದಲ್ಲಿ ಉಪಮುಖ್ಯಮಂತ್ರಿಯಾಗಲು, ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ರಜತ ಮಹೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇವರಾಜು ಅರಸು ಅವರ ಮುಂದಾಳತ್ವದಲ್ಲಿ ಹಾವನೂರು ಆಯೋಗದ ವರದಿ ಮೂಲಕ 1977ರಲ್ಲಿ ಮೀಸಲಾತಿ ಜಾರಿಗೆ ಬಂತು. ಆಗ ದೇವರಾಜ ಅರಸು ಅವರು ಹಿಂದುಳಿದ ಜಾತಿಗಳ ಹೊಸ ಇಲಾಖೆಯನ್ನು ಪ್ರಾರಂಭ ಮಾಡಿದರು. ಶಿಕ್ಷಣದಲ್ಲಿ ಒತ್ತು ನೀಡುವ ಜೊತೆಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಕೊಟ್ಟರು. ಅಲ್ಲಿಯವರೆಗೆ ಮೀಸಲಾತಿ ಇರಲಿಲ್ಲ. ನಾನು ಓದುವ ಸಂದರ್ಭದಲ್ಲಿ ಮೀಸಲಾತಿ ಇರಲಿಲ್ಲ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಇಲಾಖೆ ಪ್ರಾರಂಭವಾದಾಗ ಅದರ ಬಜೆಟ್ ಕೇವಲ 5 ಕೋಟಿ ರೂ. ಆಗಿತ್ತು. ನಾನು ಮುಖ್ಯಮಂತ್ರಿಯಾದ ಮೇಲೆ 26-27ರಲ್ಲಿ ಬಜೆಟ್ ಮಂಡಿಸಿದಾಗ 4,460 ಕೋಟಿ ರೂ. ಗೆ ತಂದಿದ್ದೆ. ಇಂದು ಹಿಂದುಳಿದ ಜಾತಿಗಳ 2,712 ಹಾಸ್ಟೆಲ್ಗಳಿವೆ, ಅದರಲ್ಲಿ 2 ಲಕ್ಷದ 58 ಸಾವಿರ ವಿದ್ಯಾರ್ಥಿಗಳಿದ್ದಾರೆ. ನಾನು ಉಪಮುಖ್ಯಮಂತ್ರಿಯಾಗಿರುವಾಗ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದೆ. ಪ್ರತಿ ಹೋಬಳಿಗೊಂದು ವಸತಿ ಶಾಲೆಗಳನ್ನು ಪ್ರಾರಂಭ ಮಾಡುತ್ತೇನೆ ಎಂದು ಅಂದು ಹೇಳಿದ್ದೆ. ಯಾಕೆಂದರೆ ದಲಿತ ಸಂಘಟನೆಗಳು ನಮಗೆ “ಸಾರಾಯಿ ಬೇಡ ವಸತಿ ಶಾಲೆಗಳು ಬೇಕು” ಎಂದು ಹೋರಾಟ ಮಾಡುತ್ತಿದ್ದರು. 19-20ವರೆಗೆ ಬಿಜೆಪಿಯವರ ಕಾಲದಲ್ಲಿ ಕೇವಲ 5-6 ಹಾಸ್ಟೆಲ್ಗಳು ಮಂಜೂರಾಗಿದ್ದವು. ನಾನು 2013ರಿಂದ 18ರವರೆಗೆ 542 ಹಾಸ್ಟೇಲ್ಗಳನ್ನು ಪ್ರಾರಂಭ ಮಾಡಿದೆ. ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದೆ. ಇಂದು ದಲಿತರಿಗೆ ಸುಮಾರು 543 ವಸತಿ ಶಾಲೆಗಳಿವೆ. ಇವನೆಲ್ಲ ನಾನು ಮುಖ್ಯಮಂತ್ರಿಯಾಗಿರುವಾಗ ಮಾಡಿರುವುದು ಎಂದು ಹೇಳಿದರು.
ಶಿಕ್ಷಣಕ್ಕಾಗಿ ವಿದ್ಯಾಸಿರಿ ಪ್ರಾರಂಭ ಮಾಡಿದೆ. ನನ್ನ ಸ್ವಂತ ಖರ್ಚಿನಲ್ಲಿ ನಾನು ರೂಮ್ ಮಾಡಿಕೊಂಡು, ಅಡುಗೆಮಾಡಿಕೊಂಡು ಓದುತ್ತಿದ್ದೆ. ಆ ಕಷ್ಟದ ಅರಿವು ನನಗಿತ್ತು. ಸಾವಿರಾರು ಮಕ್ಕಳು ಹಾಸ್ಟೆಲ್ಗಳಲ್ಲಿ ಸೀಟು ಸಿಗದೆ ಓದುತ್ತಿದ್ದರು. ಅವರ ವಿದ್ಯಾಭ್ಯಾಸ ಮೊಟಕುಗೊಳ್ಳಬಾರದು ಎಂಬ ಉದ್ದೇಶದಿಂದ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದೆ. ಪ್ರತಿ ವಿದ್ಯಾರ್ಥಿಗೆ 1500 ರೂ.ಗಳನ್ನು ತಿಂಗಳಿಗೆ ಕೊಡುತ್ತಾ , 1 ವರ್ಷಕ್ಕೆ 15 ಸಾವಿರ ರೀತಿಯಲ್ಲಿ ಹಣವನ್ನು ನೀಡಿದ್ದೆ ಎಂದು ತಿಳಿಸಿದರು.
ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಬಾರದು. ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆ ಎಲ್ಲಿಯವರೆಗೆ ಸಿಗುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲೇಬೇಕು. ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ. ಇದನ್ನೆಲ್ಲ ಜನರು ಕೊಟ್ಟ ಶಕ್ತಿ, ಆಶೀರ್ವಾದದಿಂದ ಮಾಡಲು ಸಾಧ್ಯವಾಯಿತು. ಈ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ. ಇದಕ್ಕೆ ನನ್ನ ಬೆಂಬಲ ಸದಾ ಇರಲಿದೆ. ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
- Backward Classes Federation
- former Chief Minister Karnataka
- Karnataka Political News
- reservation in Karnataka
- Siddaramaiah
- Siddaramaiah latest news.
- Siddaramaiah statement
- social justice Karnataka
- ಕರ್ನಾಟಕ ರಾಜಕೀಯ
- ಕರ್ನಾಟಕ ಸುದ್ದಿ
- ಮಾಜಿ ಮುಖ್ಯಮಂತ್ರಿ
- ಮೀಸಲಾತಿ ಹೇಳಿಕೆ
- ರಾಜಕೀಯ ಸುದ್ದಿಗಳು
- ಸಿದ್ದರಾಮಯ್ಯ
- ಸಿದ್ದರಾಮಯ್ಯ ಭಾಷಣ
- ಹಿಂದುಳಿದ ಜಾತಿಗಳ ಒಕ್ಕೂಟ





Leave a comment