SUDDIKSHANA KANNADA NEWS/ DAVANAGERE/ DATE-02-07-2025
ದಾವಣಗೆರೆ: ದಾವಣಗೆರೆಯಲ್ಲಿ ಹೃದಯಘಾತಕ್ಕೊಳಗಾಗಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಎದೆನೋವು ಎಂದು ಆಸ್ಪತ್ರೆಗೆ ಹೋದವರು ಹಾರ್ಟ್ ಅಟ್ಯಾಕ್ ಆಗಿ ಉಸಿರು ಚೆಲ್ಲಿದ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ: ಪ್ರಧಾನಮಂತ್ರಿ ಅವಾಸ್ 2.0 ಯೋಜನೆಯಡಿ ಅರ್ಜಿ ಆಹ್ವಾನ

ದಾವಣಗೆರೆ ತಾಲೂಕಿನ ಐಗೂರು ಗೊಲ್ಲರಹಟ್ಟಿಯ ಜಯಪ್ಪ (44) ಮೃತಪಟ್ಟ ದುರ್ದೈವಿ. ಐಗೂರು ಗೊಲ್ಲರಹಟ್ಟಿಯ ಕೃಷಿಕ ಹಾಗೂ ಪೇಟಿಂಗ್ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವಪುತ್ರಿ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಐಗೂರು ಗೊಲ್ಲರಹಟ್ಟಿಯಲ್ಲಿ ನೆರವೇರಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟತ್ತು.
ಆಗಿದ್ದೇನು…?
ಜಯಪ್ಪ ಅವರು ದಾವಣಗೆರೆಯ ರಾಮ್ ಅಂಡ್ ಕೋ ಸರ್ಕಲ್ ಬಳಿ ಪೇಟಿಂಗ್ ಕೆಲಸಕ್ಕೆ ಇಬ್ಬರ ಜೊತೆ ಬಂದಿದ್ದರು. ಪೇಟಿಂಗ್ ಕೆಲಸ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಆಗ ಎದೆನೋವು ಜಾಸ್ತಿಯಾಗಿದ್ದು, ಆಸ್ಪತ್ರೆಗೆ ತೋರಿಸುತ್ತೇನೆ ಎಂದು ಹೇಳಿ ಹೋದ ಜಯಪ್ಪ ಅವರು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಹೋಗಿದ್ದಾರೆ. ಆಗ ವೈದ್ಯರು ಇದು ಗಂಭೀರ ಸಮಸ್ಯೆಯಾಗಿದ್ದು, ಕೂಡಲೇ ಬೇರೆ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದಾರೆ.
ಬೈಕ್ ನಲ್ಲಿಯೇ ಬಾಪೂಜಿ ಆಸ್ಪತ್ರೆಗೆ ಜಯಪ್ಪ ಹೋಗಿದ್ದಾರೆ. ಆಸ್ಪತ್ರೆಯೊಳಗೆ ನಡೆದುಕೊಂಡೇ ಹೋಗಿದ್ದಾರೆ. ವೈದ್ಯರ ಬಳಿ ತೋರಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಂತೆ ವೈದ್ಯರಿಗೆ ಇದು ಗಂಭೀರವಾಗಿದೆ ಎಂಬುದು ಗೊತ್ತಾಗಿದೆ. ಕೂಡಲೇ ಐಸಿಯುಗೆ ಸ್ಥಳಾಂತರಿಸಲಾಗಿದೆ. ಅಲ್ಲಿಗೆ ಹೋದಾಗ ಚಿಕಿತ್ಸೆ ನೀಡುತ್ತಿದ್ದಾಗಲೇ ಜಯಪ್ಪ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಯಾವುದೇ ರೀತಿಯ ಸಾಲ, ಸಮಸ್ಯೆಗಳು ಇರಲಿಲ್ಲ. ನಾಲ್ಕು ಎಕರೆ ಜಮೀನಿನಲ್ಲಿ ತೋಟವನ್ನೂ ಕಟ್ಟಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸವನ್ನೂ ಕೊಡಿಸುತ್ತಿದ್ದರು. ಈ ಹಿಂದೆಯೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರಲಿಲ್ಲ. ಇಷ್ಟೊಂದು ಚೆನ್ನಾಗಿಯೇ ಇದ್ದ ಜಯಪ್ಪರ ಸಾವು ಎಲ್ಲರಿಗೂ ಆಘಾತ ತಂದಿದೆ ಎನ್ನುತ್ತಾರೆ ಸಹೋದರ ಕರಿಯಪ್ಪ ಅವರು.
ವೈದ್ಯರ ಬಳಿ ವಿಚಾರಿಸಿದಾಗ ಹೃದಯ ಸ್ತಂಭನವಾಗಿದೆ. ರಕ್ತ ಹೆಪ್ಪುಗಟ್ಟಿದೆ. ಯಾವುದೇ ರೀತಿಯ ಚಲನೆ ಇರಲಿಲ್ಲ. ನಾವು ಬದುಕಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಕರಿಯಪ್ಪ ಅವರು ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ 19 ವರ್ಷದ ಯುವತಿ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ದಾವಣಗೆರೆಯಲ್ಲಿ ವರದಿಯಾದ ಎರಡನೇ ಪ್ರಕರಣ ಇದಾಗಿದೆ. ಮನೆಯಲ್ಲಿ ಇದ್ದಾಗ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವಿಗೀಡಾಗಿದ್ದಳು. ಈಗ ಜಯಪ್ಪ ಅವರು ಮೃತಪಟ್ಟಿರುವುದು ದಾವಣಗೆರೆ ಜನರಲ್ಲಿ ಆತಂಕ ತಂದಿದೆ.