SUDDIKSHANA KANNADA NEWS/ DAVANAGERE/ DATE-05-05-2025
ದಾವಣಗೆರೆ: ಅತ್ಯಂತ ಕಡಿಮೆ ವಯಸ್ಸಿನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಹಾನಗರ ಪಾಲಿಕೆ ಸದಸ್ಯರಾಗಬೇಕೆಂಬ ಕನಸು ಕಂಡಿದ್ದ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಆಸೆ ಕೊನೆಗೂ ಈಡೇರಲೇ ಇಲ್ಲ.
ದಾವಣಗೆರೆಯ ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ಕಲ್ಲೇಶ್ವರ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದ ಜಿಮ್ ಸಮೀಪದ ಕ್ಲಬ್ ನೊಳಗೆ ನುಗ್ಗಿರುವ ಹಂತಕರು ಮೊದಲು ತಲೆಗೆ
ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಕಾಲು, ಕೈ, ಮೈಗೆ ಥಳಿಸುವುದಕ್ಕಿಂತ ಹೆಚ್ಚಾಗಿ ತಲೆ ಮತ್ತು ಕುತ್ತಿಗೆಗೆ ಮನಬಂದಂತೆ ಹೊಡೆದು ಕೊಂದು ಹಾಕಿದ್ದಾರೆ. ಸ್ಥಳದಲ್ಲಿನ ರಕ್ತಸಿಕ್ತ ದೃಶ್ಯ ನೋಡಿದರೆ ಭೀಕರವಾಗಿ ಹತ್ಯೆ
ಮಾಡಿ ಪರಾರಿಯಾಗಿದ್ದಾರೆ.
ಕಳೆದ ಬಾರಿ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದುಕೊಂಡಿದ್ದರೂ ಕೆಲ ಕಾರಣಗಳಿಂದ ಸಾಧ್ಯವಾಗಲಿಲ್ಲ. ವಾರ್ಡ್ ಸಹ ಮಹಿಳೆಗೆ ಮೀಸಲಾತಿ ಬಂದಿತ್ತು. ಆದ ಕಾರಣ ತನ್ನ
ಅತ್ತೆ ಸ್ಪರ್ಧೆಗಿಳಿಸಿ ಗೆಲ್ಲಿಸುವಲ್ಲಿ ಯಶಸ್ವಿ ಆಗಿದ್ದರು. ನಿಟುವಳ್ಳಿ ಹೊಸ ಬಡಾವಣೆಯ ವಾಸಿಯಾಗಿದ್ದ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಬುಳ್ ನಾಗನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿಂದ ಕಣುಮಾ ಹೆಸರು ಜೋರಾಗಿತ್ತು.
ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಜಮೀನೊಂದರ ವ್ಯಾಜ್ಯ ವಿಚಾರ ಸಂಬಂಧ ಬೆದರಿಕೆ ಹಾಕಿದ ಪ್ರಕರಣವು ಸಂತೋಷ್ ಅಲಿಯಾಸ್ ಕಣುಮಾ ಅವರ ಮೇಲೆ ದಾಖಲಿಸಲಾಗಿತ್ತು. ಬುಳ್ ನಾಗನ ಹತ್ಯೆ ಬಳಿಕ ಸಂತೋಷ್
ಸಾಮಾಜಿಕ ಸೇವೆ, ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಜನುಮದಿನದಂದು ನಗರದ ಜಯದೇವ ವೃತ್ತದಲ್ಲಿ ದೊಡ್ಡ ದೊಡ್ಡ ಬ್ಯಾನರ್, ಬಂಟಿಂಗ್ಸ್ ಅಳವಡಿಸಲಾಗಿತ್ತು.
ಸಂತೋಷ್ ಕುಮಾರ್ ಅವರು ಲ್ಯಾಂಡ್ ಡೀಲಿಂಗ್ ಕೂಡ ನಡೆಸುತ್ತಿದ್ದರು. ರಿಯಲ್ ಎಸ್ಟೇಟ್ ನಲ್ಲಿ ಹೆಸರು ಜೋರಾಗಿ ನಡೆಯುತಿತ್ತು. ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹೆಸರು ಬಾಡಿಬ್ಯುಲ್ಡರ್ ಒಬ್ಬರನ್ನು
ಉಚ್ಚಿಂಗಿದುರ್ಗ ಸಮೀಪದಲ್ಲಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿತ್ತು. ಸ್ಥಳಕ್ಕೆ ಐಜಿಪಿ, ಎಸ್ಪಿ ಉಮಾ ಪ್ರಶಾಂತ್, ವಿದ್ಯಾನಗರ ಪೊಲೀಸರು, ಶ್ವಾನದಳ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ
ಪರಿಶೀಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.