ಬೆಂಗಳೂರು: ಗಣೇಶೋತ್ಸವ ಮೆರವಣಿಗೆ ಮಸೀದಿ ಮುಂದೆ ಹೋಗಬಾರದಂತೆ! ಗಣೇಶೋತ್ಸವ ಮೆರವಣಿಗೆಯಲ್ಲಿ ಮಸೀದಿ ಮುಂದೆ ಪಟಾಕಿ ಹೊಡೆಯಬಾರದಂತೆ! ಕರ್ನಾಟಕದಲ್ಲಿ ಇರುವುದು ಸಂವಿಧಾನದ ಆಡಳಿತವೋ ಅಥವಾ ಶರಿಯಾ ಕಾನೂನೋ? ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಇರುವುದು ಪ್ರಜಾಪ್ರಭುತ್ವವೋ ಅಥವಾ ತಾಲಿಬಾನಿ ಹುಕುಮ್ಮತ್ತೋ? ಇದೇನಾ ‘ಎಲೆಕ್ಷನ್ ಹಿಂದೂ’ ಡಿ. ಕೆ. ಶಿವಕುಮಾರ್ ಸರ್ಕಾರದ ನಿಜವಾದ ಭಕ್ತಿ? ಎಂದು ಪ್ರಶ್ನಿಸಿದ್ದಾರೆ.
ಹಿಂದೂಗಳ ಪವಿತ್ರ ಹಬ್ಬ ಗಣೇಶೋತ್ಸವದ ಆಚರಣೆಗೆ ಇಲ್ಲಸಲ್ಲದ ನಿರ್ಬಂಧ ಹೇರಿ, ಭಕ್ತಾದಿಗಳಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಪೊಲೀಸರು ಇಳಿದಿರುವುದು ಈ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ, ಓಲೈಕೆ ರಾಜಕಾರಣ ಯಾವ ಪರಾಕಾಷ್ಠೆಗೆ ತಲುಪಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನವಾಗಿದೆ ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷ ಸ್ವತಃ ಗಣಪತಿಯ ವಿಗ್ರಹವನ್ನೇ ಪೊಲೀಸ್ ವ್ಯಾನ್ಗೆ ಹತ್ತಿಸಿ ಅವಮಾನಿಸಿದ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ, ಈ ಬಾರಿ ಗಣೇಶನನ್ನು ಕೂರಿಸುವ ಮುನ್ನವೇ ಹಿಂದೂ ಸಮಾಜದ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷರ ಆಡಳಿತದ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಲೋಕಮಾನ್ಯ ತಿಲಕರಿಂದ ಆರಂಭಗೊಂಡ ಸಾರ್ವಜನಿಕ ಸಾಮೂಹಿಕ ಗಣೇಶೋತ್ಸವ ಇಂದಿಗೂ ದೇಶಾದ್ಯಂತ ಕೋಟ್ಯಂತರ ಭಾರತೀಯರ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ಸವಾರಿ ಮಾಡುವ ದುಸ್ಸಾಹಸಕ್ಕೆ ಕೈಹಾಕಬೇಡಿ. ಹಿಂದೂಗಳ ಆಚರಣೆ ಮತ್ತು ಭಕ್ತಿಗೆ ಅಡ್ಡಿಪಡಿಸಿದ ಯಾವ ಸರ್ಕಾರವೂ ಉಳಿದಿಲ್ಲ. ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟವಾಡಿದರೆ, ಈ ಕಾಂಗ್ರೆಸ್ ಸರ್ಕಾರ ಧೂಳಿಪಟವಾಗುವುದು ನಿಶ್ಚಿತ! ಎಂದು ಭವಿಷ್ಯ ನುಡಿದಿದ್ದಾರೆ.
ತಕ್ಷಣವೇ ಈ ಹಿಂದೂ ವಿರೋಧಿ ನಿರ್ಬಂಧಗಳನ್ನು ಹಿಂಪಡೆಯಿರಿ. ಹಿಂದೂಗಳು ನೆಮ್ಮದಿಯಿಂದ, ಗಣೇಶೋತ್ಸವ ಆಚರಿಸಲು ಬಿಡಿ. ಇಲ್ಲವಾದಲ್ಲಿ ನಿಮ್ಮ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.






Leave a comment