ನವದೆಹಲಿ: ಕೇರಳ ಮೂಲದ ಪ್ರಸಿದ್ಧ ಇಸ್ಲಾಮಿಕ್ ಧಾರ್ಮಿಕ ಪಂಡಿತ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ಎಲ್ಲ ವಿಚಾರಗಳು ಮತ್ತು ಅಭಿಪ್ರಾಯಗಳನ್ನು ತಾವು ಒಪ್ಪುವುದಿಲ್ಲ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
ಕೋಝಿಕೋಡ್ನಲ್ಲಿ ಕಾಂತಪುರಂ ಅವರನ್ನು ಭೇಟಿಯಾಗುವ ಒಂದು ದಿನ ಮುಂಚಿತವಾಗಿ, ನವದೆಹಲಿಯಲ್ಲಿ ನಡೆದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಮಹಿಳೆಯರು ಮನೆಯೊಳಗೆ ಇರಬೇಕು ಎಂಬ ಧಾರ್ಮಿಕ ಮುಖಂಡ ಕಾಂತಪುರಂ ಅವರ ಇತ್ತೀಚಿನ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅನ್ವರ್ ಇಬ್ರಾಹಿಂ, “ಅವರು ಖುರಾನ್, ಪ್ರವಾದಿಯ ಬೋಧನೆಗಳು ಮತ್ತು ಧಾರ್ಮಿಕ ಗ್ರಂಥಗಳನ್ನು ಚೆನ್ನಾಗಿ ಅರಿತಿರುವ ಸಾಂಪ್ರದಾಯಿಕ ಧಾರ್ಮಿಕ ಪಂಡಿತರು. ಆದರೆ ಅವರ ಎಲ್ಲ ಅಭಿಪ್ರಾಯಗಳನ್ನು ನಾವು ಒಪ್ಪಲೇಬೇಕೆಂದಿಲ್ಲ” ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಮಲೇಷ್ಯಾದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳಿವೆ ಎಂಬುದನ್ನು ನಾನು ಅವರ ಮುಖಕ್ಕೆ ನೇರವಾಗಿಯೇ ಹೇಳುತ್ತೇನೆ. ಮಲೇಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಪುರುಷರಿಗಿಂತ ಮಹಿಳಾ ವಿದ್ಯಾರ್ಥಿನಿಯರೇ ಹೆಚ್ಚಿದ್ದಾರೆ. ನನ್ನ ಪತ್ನಿ ವೈದ್ಯರಾಗಿದ್ದಾರೆ, ನನ್ನ ಹೆಣ್ಣುಮಕ್ಕಳು ಸೇರಿದಂತೆ ಎಲ್ಲ ಮಕ್ಕಳಿಗೂ ಶಿಕ್ಷಣ ಮತ್ತು ಸ್ವಾತಂತ್ರ್ಯವನ್ನು ನೀಡಲಾಗಿದೆ” ಎಂದು ಹೇಳಿದರು. ಈ ವಿಷಯದ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ಚರ್ಚಿಸಿದ್ದೇನೆ ಎಂದು ಅವರು ತಿಳಿಸಿದರು.
ಮಲೇಷ್ಯಾದಲ್ಲಿ ದಕ್ಷಿಣ ಭಾರತದ, ಮುಖ್ಯವಾಗಿ ತಮಿಳುನಾಡಿನ ಅನೇಕ ಜನರಿದ್ದಾರೆ. ಆದ್ದರಿಂದ ತಮಿಳುನಾಡಿಗೆ ಭೇಟಿ ನೀಡಲು ಬಯಸಿದ್ದೆ. ಆದರೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ವಿದೇಶ ಪ್ರವಾಸದಲ್ಲಿರುವ ಕಾರಣ ಆ ಪ್ರವಾಸವನ್ನು ಮುಂದೂಡಿ ಕೇರಳ ಪ್ರವಾಸಕ್ಕೆ ಆದ್ಯತೆ ನೀಡಿದ್ದೇನೆ ಎಂದು ಅವರು ವಿವರಿಸಿದರು.
ಕಾಂತಪುರಂ ಅವರು ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಸಮಾವೇಶದಲ್ಲಿ “ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬರಬಾರದು, ಮನೆಯಲ್ಲೇ ಇರಬೇಕು” ಎಂದು ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಹೇಳಿಕೆಗೆ ಕೇರಳದ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.





Leave a comment