ಪುಣೆ: ಪ್ರೀತಿ, ವಂಚನೆ ಹಾಗೂ ಅತ್ಯಂತ ಕ್ರೂರ ಸಂಚಿನ ಭೀಕರ ಕಥೆಯೊಂದು ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಮದುವೆ ನಿಶ್ಚಯವಾಗಿದ್ದ ಉದ್ಯಮಿ ಕೇತನ್ ಅಗರ್ವಾಲ್ (26) ಎಂಬ ಯುವಕನನ್ನು ಆತನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಲೋಹಗಢ ಕೋಟೆಯ 400 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ.
ಅಪಘಾತದ ನಾಟಕ ವಾಟ್ಸಾಪ್-ಇನ್ಸ್ಟಾಗ್ರಾಮ್ ಸ್ಟೋರಿ!
ಜೂನ್ ೧೮ ರಂದು ಟ್ರೆಕ್ಕಿಂಗ್ ಮಾಡುವಾಗ ಕೇತನ್ ಕಾಲು ಜಾರಿ ಬಿದ್ದಿದ್ದಾನೆ ಎಂದು ಸಿಯಾ ಪೊಲೀಸರಿಗೆ ಕಥೆ ಕಟ್ಟಿದ್ದಳು. ಅಷ್ಟೇ ಅಲ್ಲದೆ, ಜೂನ್ ೨೦ ರಂದು ತನ್ನ ಹುಟ್ಟುಹಬ್ಬದ ದಿನದಂದೇ ಇನ್ಸ್ಟಾಗ್ರಾಮ್ನಲ್ಲಿ “ನನ್ನ ಹುಟ್ಟುಹಬ್ಬದಂದೇ ನನ್ನನ್ನು ಬಿಟ್ಟು ಹೋದೆಯಾ, ವಾಪಸ್ ಬಂದುಬಿಡು” ಎಂದು ಕಣ್ಣೀರಿನ ಪೋಸ್ಟ್ ಹಾಕಿ ನಾಟಕವಾಡಿದ್ದಳು. ಆದರೆ ಪೊಲೀಸರ ತನಿಖೆಯಲ್ಲಿ ಇದು ಆಕಸ್ಮಿಕ ಸಾವಲ್ಲ, ಪಕ್ಕಾ ಪ್ಲಾನ್ ಮಾಡಿ ನಡೆಸಿದ ಕೊಲೆ ಎಂಬುದು ಬಯಲಾಗಿದೆ.
ಕೊಲೆಗೆ ನಡೆದಿದ್ದವು 2 ಯತ್ನಗಳು!
ಬಾಲಿ ಪ್ರವಾಸ ರದ್ದು: ಮೊದಲಿಗೆ ಕೇತನ್ನನ್ನು ವಿದೇಶದಲ್ಲಿ ಕೊಲ್ಲಲು ಸಾಧ್ಯವಾಗದ ಕಾರಣ, ಸಿಯಾ ಆತನ ಪಾಸ್ಪೋರ್ಟ್ ಕದ್ದು ಬಾಲಿ ಪ್ರವಾಸ ರದ್ದಾಗುವಂತೆ ಮಾಡಿದ್ದಳು.
ಹಾವು ಬಿಟ್ಟು ಕೊಲ್ಲಲು ಯತ್ನ (ಜೂನ್ 14): ಜೂನ್ 14 ರಂದು ಮೊದಲ ಬಾರಿ ಕೋಟೆಗೆ ಕರೆದೊಯ್ದು ಹಾವಿನ ಭಯ ತೋರಿಸಿ ಪ್ರಪಾತಕ್ಕೆ ತಳ್ಳಲು ಯತ್ನಿಸಿದ್ದರು, ಆದರೆ ಅದು ವಿಫಲವಾಗಿತ್ತು.
ಕೋಲಿನಿಂದ ಹೊಡೆದು ತಳ್ಳಿದರು (ಜೂನ್ 18): ಕೊನೆಗೆ ಜೂನ್ ೨೦ರ ತನ್ನ ಬರ್ತ್ಡೇ ಪಿಕ್ನಿಕ್ ನೆಪದಲ್ಲಿ ಮತ್ತೆ ಕೋಟೆಗೆ ಕರೆದೊಯ್ದು, ಪ್ರೇಮಿ ಚೇತನ್ ಜೊತೆಗೂಡಿ ತಲೆಗೆ ಹೊಡೆದು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?
ಕೇತನ್ ಉತ್ತಮ ಟ್ರೆಕ್ಕರ್ ಆಗಿದ್ದರಿಂದ ಆತನ ಪೋಷಕರಿಗೆ ಅನುಮಾನ ಬಂದಿತ್ತು. ಪೊಲೀಸರು ಸಿಯಾಳ ಕಾಲ್ ರೆಕಾರ್ಡ್ಸ್ ಪರಿಶೀಲಿಸಿದಾಗ ಆಕೆ ತನ್ನ ಪ್ರೇಮಿ ಚೇತನ್ ಜೊತೆ 6 ತಿಂಗಳಲ್ಲಿ 2004 ಬಾರಿ (238 ಗಂಟೆ) ಮಾತನಾಡಿದ್ದು ಪತ್ತೆಯಾಗಿದೆ. ಚೇತನ್ ಕೊಲೆ ದಿನ ಮೊಬೈಲ್ ಅಂಗಡಿಯಲ್ಲೇ ಬಿಟ್ಟು ಸುಳ್ಳು ಸಾಕ್ಷಿ ಸೃಷ್ಟಿಸಲು ಯತ್ನಿಸಿದ್ದರೂ ತಾಂತ್ರಿಕ ತನಿಖೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿ 7 ದಿನಗಳ ಕಸ್ಟಡಿಗೆ ಪಡೆದಿದ್ದಾರೆ.





Leave a comment