SUDDIKSHANA KANNADA NEWS/ DAVANAGERE/ DATE:10-11-2023
ದಾವಣಗೆರೆ: ನಗರದ ಶಾಮನೂರು ರಸ್ತೆಯಲ್ಲಿರುವ ಎಂ.ಬಿ.ಎ. ಇಂಡೋರ್ ಆಡಿಟೋರಿಯಮ್ ನಲ್ಲಿ ಏರ್ಪಡಿಸಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಯುವ ರಾಜಕಾರಣಿ ಜಿ. ಬಿ. ವಿನಯ್ ಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಒತ್ತಾಯಿಸಿದರು. ವಿನಯ್ ಕುಮಾರ್ ಭಾವಚಿತ್ರವುಳ್ಳ ಪೋಸ್ಟರ್ ಹಿಡಿದು ಆಗ್ರಹಿಸಿದ ಘಟನೆ ನಡೆಯಿತು.
ಜಿ. ಬಿ. ವಿನಯ್ ಕುಮಾರ್ ಜೈ, ಅವರಿಗೆ ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ 150ಕ್ಕೂ ಹೆಚ್ಚು ಬೆಂಬಲಿಗರು ಒತ್ತಾಯಿಸಿದರು. ಮಾತ್ರವಲ್ಲ, ಲೋಕಸಭೆ ಚುನಾವಣೆಯ ದಾವಣಗೆರೆ ಕಾಂಗ್ರೆಸ್ ನ ಉಸ್ತುವಾರಿ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಕಾಂಗ್ರೆಸ್ ಜಿಲ್ಲಾ ಮುಖಂಡರು ವೇದಿಕೆಯಲ್ಲಿದ್ದರು. ಈ ವೇಳೆ ವಿನಯ್ ಕುಮಾರ್ ಪರ ಘೋಷಣೆಗಳು ಮೊಳಗಿದವು.
2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕು. ಈ ಮೂಲಕ ಯುವಕರಿಗೆ ಅವಕಾಶ ನೀಡಬೇಕು. ಜಿಲ್ಲೆಯ ಹಳ್ಳಿ ಹಳ್ಳಿಗಳಿಗೂ ಹೋಗುತ್ತಿರುವ ವಿನಯ್ ಕುಮಾರ್ ಅವರಿಗೆ ಟಿಕೆಟ್ ಕೊಟ್ಟರೆ ಪ್ರಬಲ ಪೈಪೋಟಿ ನೀಡಬಹುದು. ಮಾತ್ರವಲ್ಲ, ಕಳೆದ ಆರು ಲೋಕಸಭೆ ಚುನಾವಣೆಗಳಲ್ಲಿ ದಾವಣಗೆರೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಈ ಬಾರಿ ವಿನಯ್ ಕುಮಾರ್ ಅವರಿಗೆ ಅವಕಾಶ ನೀಡಿದರೆ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎಂದು ವಿನಯ್ ಕುಮಾರ್ ಬೆಂಬಲಿಗರು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿನಯ್ ಕುಮಾರ್ ಅವರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿ ವಿನಯ್ ಕುಮಾರ್ ಬೆಂಬಲಿಗರು ಪೋಸ್ಟರ್ ಹಿಡಿದು ಆಗ್ರಹಿಸಿದ ಪ್ರಸಂಗವೂ ನಡೆಯಿತು. ವಿನಯ್ ಕುಮಾರ್ ಅವರು ಯುವಕರಾಗಿದ್ದು, ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಯುವ ಉತ್ಸಾಹಿ, ಯುವ ರಾಜಕಾರಣಿ ವಿನಯ್ ಕುಮಾರ್ ಅವರಿಗೆ ಟಿಕೆಟ್ ಕೊಡಿ ಎಂದು ಅವರ ಸುಮಾರು 150ಕ್ಕೂ ಹೆಚ್ಚು ಬೆಂಬಲಿಗರು ಕೂಗಾಟ ನಡೆಸಿದರು. ಈ ವೇಳೆ ಸ್ವಲ್ಪ ಹೊತ್ತು ಗೊಂದಲದ ವಾತಾವರಣವೂ ನಿರ್ಮಾಣವಾಯಿತು.
ಈ ವೇಳೆ ಬೇರೆ ಯಾರ ಪರ ಘೋಷಣೆ ಹಾಕಲಿಲ್ಲ. ವಿನಯ್ ಕುಮಾರ್ ಪರ ಘೋಷಣೆ ಹಾಕುತ್ತಿದ್ದಂತೆ ವೇದಿಕೆಯಲ್ಲಿ ಕುಳಿತಿದ್ದ ಈಶ್ವರ್ ಖಂಡ್ರೆ ಅವರು ಎಲ್ಲವನ್ನೂ ಗಮನಿಸಿದರು. ಶಾಮನೂರು ಶಿವಶಂಕರಪ್ಪ ಅವರು ಸಹ ಎಲ್ಲವನ್ನೂ ಗಮನಿಸಿದರು. ಬಳಿಕ ಮಾತನಾಡಿದ ಈಶ್ವರ್ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಲೋಕಸಭೆ ಚುನಾವಣೆಗೆ ಯಾರಿಗೆ ಟಿಕೆಟ್ ನೀಡಿದರೂ ಆರಿಸಿ ಗೆಲ್ಲಿಸಿ ಕಳುಹಿಸಿಕೊಡಿ. ಟಿಕೆಟ್ ಅನ್ನು ನೀಡುವುದು ಪಕ್ಷದ ಹೈಕಮಾಂಡ್. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ. ನೀವೆಲ್ಲರೂ ವಿಧಾನಸಭೆ ಚುನಾವಣೆಗಳಲ್ಲಿ ಕೆಲಸ ನಿರ್ವಹಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣೀಕರ್ತರಾಗಿದ್ದೀರಾ. ಹಾಗಾಗಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ವಿನಯ್ ಕುಮಾರ್ ಬೆಂಬಲಿಗರು ಆಡಿಟೋರಿಯಂ ಒಳಗೆ ಹಾಗೂ ಹೊರಗಡೆಯೂ ಸಹ ಘೋಷಣೆ ಹಾಕಿದರು. ಈ ವೇಳೆ ಬಂದ ವಿನಯ್ ಕುಮಾರ್ ಅವರ ಮುಂದೆಯೇ ಪೋಸ್ಟರ್ ಹಿಡಿದು ಜೈಕಾರ ಮತ್ತೆ ಕೂಗಿದರು. ವಿನಯ ಕುಮಾರ್ ಅವರ ಬಳಿ ಬಂದು ಯುವಕರು ನಿಮಗೆ ಟಿಕೆಟ್ ನೀಡಬೇಕು. ಯುವಕರು ರಾಜಕಾರಣಕ್ಕೆ ಬರಬೇಕು. ಎಲ್ಲಾ ವರ್ಗದವರ ನೆರವಿನಿಂದ ನಿಮ್ಮನ್ನು ಗೆಲ್ಲಿಸಲು ನಾವೆಲ್ಲರೂ ಪ್ರಯತ್ನಿಸುತ್ತೇವೆ ಎಂದು ಬೆಂಬಲಿಗರು ಹೇಳಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಅವರು ವೇದಿಕೆಯಲ್ಲಿ ಹಾಜರಿದ್ದರು. ಕಳೆದ ಚುನಾವಣೆಯಲ್ಲಿ ಮಂಜಪ್ಪರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೂ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಸೋತಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ. ಎಂ. ಸಿದ್ದೇಶ್ವರ ಅವರು ಗೆಲುವಿನ ನಗೆ ಬೀರಿದ್ದಾರೆ.
ಕಳೆದ ಆರು ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್ ಗೆದ್ದಿಲ್ಲ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮೂರು ಬಾರಿ ಸ್ಪರ್ಧಿಸಿ ಸಿದ್ದೇಶ್ವರ ವಿರುದ್ದ ಸೋಲು ಕಂಡಿದ್ದರು. ಇನ್ನು ಹೆಚ್. ಬಿ. ಮಂಜಪ್ಪ ಒಮ್ಮೆ ಸೋತಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಹ ಅಳೆದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡಲಿದೆ.
ಸಭೆ ಬಳಿಕ ಮಾತನಾಡಿದ ಈಶ್ವರ ಖಂಡ್ರೆ, ಕಾಂಗ್ರೆಸ್ ಜಿಲ್ಲಾ ಸಮಿತಿ, ವಿವಿಧ ಘಟಕಗಳು, ಕೆಪಿಸಿಸಿ ಪದಾಧಿಕಾರಿಗಳು, ಸದಸ್ಯರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಆಲಿಸಿದ್ದೇನೆ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ಗೆ ಕಳುಹಿಸಿಕೊಡುತ್ತೇನೆ. ದಾವಣಗೆರೆ ಜಿಲ್ಲೆ ಉಸ್ತುವಾರಿಯನ್ನಾಗಿ ನನ್ನನ್ನು ನೇಮಿಸಲಾಗಿದೆ. ಅಭಿಪ್ರಾಯ ಆಲಿಸಲು ಇಲ್ಲಿಗೆ ಬಂದಿದ್ದು, ಎಲ್ಲರ ಅಭಿಪ್ರಾಯ ಕೇಳಿದ್ದೇನೆ. ಪಕ್ಷದ ವರಿಷ್ಠರಿಗೆ ವರದಿ ನೀಡುತ್ತೇನೆ. ಅಂತಿಮವಾಗಿ ಟಿಕೆಟ್ ಯಾರಿಗೆ ನೀಡಬೇಕೆಂದು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು.