ಬೆಂಗಳೂರು/ನವದೆಹಲಿ: ಆರ್ಎಸ್ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಯುವ ಜನತೆಯನ್ನು (Gen Z) ತಲುಪಲು ನಡೆಸುತ್ತಿರುವ ಪ್ರಯತ್ನಗಳನ್ನು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. “ಆರ್ಎಸ್ಎಸ್ ಮತ್ತು ಬಿಜೆಪಿ ಕೇವಲ ತಮ್ಮ ಶಬ್ದಕೋಶವನ್ನು ಬದಲಾಯಿಸುತ್ತಿವೆಯೇ ಹೊರತು ತಮ್ಮ ಸಿದ್ಧಾಂತವನ್ನಲ್ಲ” ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಮುಂಬೈನಲ್ಲಿ ನಡೆದ ಐಐಎಂಯುಎನ್ (IIMUN) ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, “ಪ್ರತಿಭಟನೆ ನಡೆಸುವ Gen Z ಯುವಕರು ದೇಶದ್ರೋಹಿಗಳಲ್ಲ. ಅವರ ಕಳವಳಗಳು ಸಮಂಜಸವಾಗಿದ್ದು, ಅವರೊಂದಿಗೆ ಸಂವಾದ ನಡೆಸುವುದು ಅಗತ್ಯ” ಎಂದು ಹೇಳಿದ್ದರು. ಇತ್ತೀಚಿನ ನೀಟ್ (NEET) ಪರೀಕ್ಷೆ ಅಕ್ರಮ ಖಂಡಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭಾಗವತ್ ಅವರ ಈ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿತ್ತು.
“ಹಳೆಯ ದ್ವೇಷಕ್ಕೆ ಹೊಸ ಪ್ಯಾಕಿಂಗ್”: ಪ್ರಿಯಾಂಕ್ ಖರ್ಗೆ
ಭಾಗವತ್ ಹೇಳಿಕೆಗೆ ಎಕ್ಸ್ (X) ಖಾತೆಯಲ್ಲಿ ಪ್ರತ್ಯುತ್ತರ ನೀಡಿರುವ ಪ್ರಿಯಾಂಕ್ ಖರ್ಗೆ, “ಆರ್ಎಸ್ಎಸ್ ಮತ್ತು ಬಿಜೆಪಿ ತಮ್ಮ ಶಬ್ದಕೋಶವನ್ನು ಅಪ್ಡೇಟ್ ಮಾಡಲು ಯತ್ನಿಸುತ್ತಿವೆ. ಆದರೆ ಅವರ ಸಿದ್ಧಾಂತ ಬದಲಾಗುವುದಿಲ್ಲ. ಜನರನ್ನು ವಿಭಜಿಸುವುದು, ಯುವಕರನ್ನು ಹಾದಿತಪ್ಪಿಸುವುದು ಮತ್ತು ದ್ವೇಷವನ್ನು ಹೊಸ ಪ್ಯಾಕಿಂಗ್ನಲ್ಲಿ ನೀಡುವುದೇ ಅವರ ನಿಜವಾದ ಸತ್ಯ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಅದೇ ಸಂಘ, ಕೇವಲ ಹೊಸ ಸ್ಲ್ಯಾಂಗ್ (Same Sangh, just different slang)” ಎಂದು ಬರೆದುಕೊಂಡಿರುವ ಅವರು, ಭಾಗವತ್ ಅವರ ಸಂವಾದವನ್ನು ವ್ಯಂಗ್ಯ ಮಾಡುವ ಕಾರ್ಟೂನ್ ಒಂದನ್ನು ಹಂಚಿಕೊಂಡಿದ್ದಾರೆ.





Leave a comment