SUDDIKSHANA KANNADA NEWS/ DAVANAGERE/ DATE:24_07_2025
ಬೆಂಗಳೂರು: ಡಿ. ಕೆ. ಶಿವಕುಮಾರ್ ಜೊತೆ ಒಪ್ಪಂದ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯ ಅವರು ರಾಜ್ಯದ ಜನರನ್ನು ಲೂಟಿ ಹೊಡೆದು ಹೈಕಮಾಂಡ್ಗೆ ಸಮಯಕ್ಕೆ ಸರಿಯಾಗಿ ಕಾಣಿಕೆ ಸಲ್ಲಿಸಿ, ಕುರ್ಚಿ ಉಳಿಸುವಲ್ಲಿ ತಾತ್ಕಾಲಿಕವಾಗಿ ಯಶಸ್ವಿಯಾಗಿದ್ದಾರೆ. ಆದರೆ ಇದರಿಂದ ಕೆರಳಿರುವ ಡಿ.ಕೆ.ಶಿವಕುಮಾರ್ ತಂಡ ಪರ್ಯಾಯ ರಣತಂತ್ರ ಹೆಣೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
READ ALSO THIS STORY: ಬೆಳೆ ವಿಮೆ ಸಮೀಕ್ಷೆ ವೇಳೆ ವ್ಯತ್ಯಾಸವಾಗದಂತೆ ನಡೆಸಿ, ಅಕ್ರಮಕ್ಕೆ ಆಸ್ಪದ ಕೊಡಬೇಡಿ: ಅಧಿಕಾರಿಗಳಿಗೆ ಖಡಕ್ ಸೂಚನೆ
ಡಿ. ಕೆ. ಶಿವಕುಮಾರ್ ಅವರು ಪಕ್ಷ ನಿಷ್ಠೆ ಹೆಸರಿನಲ್ಲಿ ಮೌನವಾಗಿದ್ದುಕೊಂಡು, ಶಾಸಕರ ಕುದುರೆ ವ್ಯಾಪಾರ ಮಾಡಲು ಮುಂದಾಗಿದ್ದಾರೆ. ಡಿಸೆಂಬರ್ ವೇಳೆಗೆ ವಚನ ದ್ರೋಹವೆಸಗಿದ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಲು ಎಲ್ಲಾ ಪೂರ್ವ ತಯಾರಿ ನಡೆಸಿದ್ದಾರೆ. ಇದಕ್ಕೆ ಚನ್ನಗಿರಿ ಶಾಸಕ, ಡಿಕೆಶಿ ಆಪ್ತ ಬಸವರಾಜ ಶಿವಗಂಗಾ ಹೇಳಿಕೆಯೇ ಸಾಕ್ಷಿ ಎಂದು ಹೇಳಿದೆ.
ಈ ಭ್ರಷ್ಟರ ಸ್ವಾರ್ಥದ ಸ್ವಪ್ರತಿಷ್ಠೆಯ ಕದನಕ್ಕೆ ಕರ್ನಾಟಕ ಮಾತ್ರ ಬಡವಾಗುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈಗಲೂ ಆರೋಪಿಯಾಗಿದ್ದಾರೆ. ಮುಡಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮುಖ್ಯಮಂತ್ರಿಗಳಿಗೆ ಕ್ಲೀನ್ ಚಿಟ್ ನೀಡಿಲ್ಲ. ಜಾರಿ ನಿರ್ದೇಶಾಲಯ ನೀಡಿದ್ದ ಸಮನ್ಸ್ ರದ್ದುಗೊಳಿಸಿರುವುದನ್ನೇ ಸಿಎಂ ನಿರಪರಾಧಿ ಎಂದು ಸಂಭ್ರಮಿಸುವುದು ಮೂರ್ಖತನ ಎಂದು ಬಿಜೆಪಿ ಟೀಕಿಸಿದೆ.
ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಅವರನ್ನು ನಿರಪರಾಧಿ ಎಂದು ನ್ಯಾಯಾಲಯ ಹೇಳಿಲ್ಲ. ಹೀಗಾಗಿ, ಸಿಎಂ ಮತ್ತು ಅವರ ಕುಟುಂಬದವರು ಮುಡಾ ಅಕ್ರಮದಲ್ಲಿ ಭಾಗಿದಾರರು ಎಂಬ ಬಿಜೆಪಿ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ತಿಳಿಸಿದೆ.