SUDDIKSHANA KANNADA NEWS/ DAVANAGERE/ DATE:10-11-2023
ದಾವಣಗೆರೆ: ನಗರದ ಪಿ. ಬಿ. ರಸ್ತೆಯ ರೇಣುಕಾ ಮಂದಿರದಲ್ಲಿ ಅಪಘಾತವಾದ ಕಾರಣಕ್ಕೆ ಪೊಲೀಸ್ ಇಲಾಖೆಯ ವತಿಯಿಂದ ಡಿವೈಡರ್ ಹಾಕಲಾಗಿದೆ. ಆದ್ರೆ, ಇದರಿಂದ ಸಾವಿರಾರು ಜನರು ಸಮಸ್ಯೆ ಅನುಭವಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್ ಹೇಳಿದ್ದು, ಕೂಡಲೇ ಡಿವೈಡರ್ ತೆಗೆದು ಜನರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ದಾವಣಗೆರೆ ಪಿ ಬಿ ರಸ್ತೆಯ ರೇಣುಕಾ ಮಂದಿರ ಎದುರು ಅಪಘಾತ ಆಗಿ ಸಾವಾಗಿತ್ತು ಎಂಬ ಒಂದೇ ಕಾರಣಕ್ಕೆ ಡಿವೈಡರ್ ಅನ್ನು ಪೊಲೀಸ್ ಇಲಾಖೆಯು ಅಳವಡಿಸಿತ್ತು. ಇದರಿಂದ ಅನೇಕ ಶಾಲಾ ಮಕ್ಕಳು, ವರ್ತಕರು, ಅಂಗಡಿ ಮಾಲೀಕರು,
ಸಾರ್ವಜನಿಕರು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ಟ್ರಾಫಿಕ್ ಪೊಲೀಸರಿಗೆ ಸಂಚಾರ ನಿರ್ವಹಣೆ ಮಾಡುವುದು ತುಂಬಾನೇ ಕಷ್ಟವಾಗಿದೆ. ಹರಿಹರ ಕಡೆಯಿಂದ ಬರುವ ಸಾರಿಗೆ ಹಾಗೂ ಖಾಸಗಿ ಬಸ್ ಗಳು ಆರ್ ಹೆಚ್ ವೃತ್ತದ ಪಕ್ಕದ ರಸ್ತೆಯಲ್ಲಿ ಗಾಂಧಿ ವೃತ್ತದ ಮೂಲಕ ಜಯದೇವ ಸರ್ಕಲ್ ಕಡೆಯಿಂದ ಕೋರ್ಟ್ ರಸ್ತೆಯ ಮೂಲಕ ಸುತ್ತು ಹೊಡೆದು ಬಸ್ ನಿಲ್ದಾಣಕ್ಕೆ ಬರುತ್ತಿವೆ. ಅಲ್ಲದೇ ಸಮಯವಾಗಿದೆ ಎಂದು ಕೆಲವು ಸಾರಿಗೆ ಬಸ್ ಗಳು ಸಹ ಅರುಣ ವೃತ್ತದ ಬಲ ಭಾಗ ಒಮ್ಮುಖವಾಗಿ ಚಲಿಸಿ ಬಸ್ ನಿಲ್ದಾಣಕ್ಕೆ ಹೋಗುತ್ತಿವೆ.
ಇದರಿಂದ ಅಪಘಾತವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆಯೂ ಹೆಚ್ಚಾಗಿದೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಲು ಕಷ್ಟಸಾಧ್ಯವಾಗಿದೆ. ಅಪಘಾತ ಆಗಿದೆ ಎಂಬ ಕಾರಣಕ್ಕೆ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದರೂ ಜನೋಪಯೋಗಿಗಿಂತ ಜನರಿಗೆ ಹೆಚ್ಚು ಸಮಸ್ಯೆಗಳನ್ನು
ತಂದೊಡ್ಡಿದೆ. ದಾವಣಗೆರೆ ಪೊಲೀಸ್ ಇಲಾಖೆ ಡಿವೈಡರ್ ತೆರವು ಮಾಡಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ ವಹಿಸಬೇಕೆಂದು ಸಾಮಾಜಿಕ ಕಾರ್ಯ ಕರ್ತ ಎಂ. ಜಿ. ಶ್ರೀಕಾಂತ್ ಮನವಿ ಮಾಡಿದ್ದಾರೆ.