ಭುವನೇಶ್ವರ: ಅಪರೂಪದ ‘ಹನುಮಾನ್ ಪೈಸಾ’ ನಾಣ್ಯದ ವ್ಯವಹಾರ ಮತ್ತು 50 ಲಕ್ಷ ರೂಪಾಯಿ ಸುಲಿಗೆಗೆ ಸಂಚು ರೂಪಿಸಿ ಒಡಿಶಾದ ಬೋಲಾಂಗೀರ್ ಮೂಲದ ಉದ್ಯಮಿಯನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ಹಾಗೂ ಪತ್ರಕರ್ತ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೋಲಾಂಗೀರ್ನ ಹೋಟೆಲ್ ಉದ್ಯಮಿ ನರೇಂದ್ರ ಸಾಹು (62) ಅಪಹರಣಕ್ಕೊಳಗಾದ ಸಂತ್ರಸ್ತ. ಆಗಸ್ಟ್ 14 ರಂದು ಬಂದೂಕಿನ ತುದಿಯಲ್ಲಿ ಇವರನ್ನು ಅಪಹರಿಸಿದ್ದ ಕಿಲಾಡಿ ಜೋಡಿ, ಭುವನೇಶ್ವರದ ಖಂಡಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲೊಂದರಲ್ಲಿ ಕೂಡಿಹಾಕಿ ತೀವ್ರವಾಗಿ ಹಲ್ಲೆ ನಡೆಸಿತ್ತು.
‘ಹನುಮಾನ್ ಪೈಸಾ’ ವಿವಾದವೇ ಕಾರಣ?
ಪೋಲಿಸರ ಪ್ರಾಥಮಿಕ ತನಿಖೆಯ ಪ್ರಕಾರ, 2020ರಲ್ಲಿ ನರೇಂದ್ರ ಸಾಹು ಅವರಿಗೆ ಅಪರೂಪದ ‘ಹನುಮಾನ್ ಪೈಸಾ’ (ಪವಾಡದ ಶಕ್ತಿಯಿದೆ ಎನ್ನಲಾದ ನಾಣ್ಯ) ನೀಡುವ ಭರವಸೆಯ ಮೇಲೆ 2.7 ಕೋಟಿ ರೂಪಾಯಿ ನೀಡಲಾಗಿತ್ತು ಎಂದು ಪ್ರಮುಖ ಆರೋಪಿ ಕ್ಷಿತೀಶ್ ಚಂದ್ರ ಸಾಹು ಹೇಳಿಕೊಂಡಿದ್ದಾನೆ. ಆದರೆ ನಾಣ್ಯವಾಗಲಿ ಅಥವಾ ಹಣವಾಗಲಿ ಮರಳಿಸದ ಕಾರಣ ಈ ಅಪಹರಣ ನಡೆಸಿರುವುದಾಗಿ ತಿಳಿಸಿದ್ದಾನೆ. ನರೇಂದ್ರ ಸಾಹು ಈ ಆರೋಪವನ್ನು ತಳ್ಳಿಹಾಕಿದ್ದಾರೆ.
ಖಾಕಿ ಬೆಂಬಲದೊಂದಿಗೆ ಸ್ಕೆಚ್:
ಉದ್ಯಮಿಯನ್ನು ಅಪಹರಿಸಿದ ನಂತರ, ಆತನ ಕೈಗೆ ಬಂದೂಕು ನೀಡಿ ಬಲವಂತವಾಗಿ ವೀಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಈ ವೀಡಿಯೋ ಇಟ್ಟುಕೊಂಡು 50 ಲಕ್ಷ ರೂ. ನೀಡದಿದ್ದರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಸಂಚಿನಲ್ಲಿ ಖಂಡಗಿರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಸ್ನೇಹಮಂಜರಿ ಸಾಹು ಹಾಗೂ ಆಕೆಯ ಆಪ್ತ, ಪತ್ರಕರ್ತ ಸಂಜಯ್ ಜೇನಾ ಭಾಗಿಯಾಗಿದ್ದರು. ಪತ್ರಕರ್ತ ಸಂಜಯ್ ಜೇನಾ ಪೊಲೀಸ್ ಅಧಿಕಾರಿಯಂತೆ ನಟಿಸಿ ಉದ್ಯಮಿಯನ್ನು ಠಾಣೆಗೆ ಕರೆತಂದಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಶೇಷ ಪೊಲೀಸ್ ಪಡೆ ಉದ್ಯಮಿಯನ್ನು ರಕ್ಷಿಸಿದ್ದು, ಖಂಡಗಿರಿ ಪಿಎಸ್ಐ ಸ್ನೇಹಮಂಜರಿ, ಪ್ರಮುಖ ಆರೋಪಿ ಕ್ಷಿತೀಶ್, ಸಂಜಿವ್ ಬೆಹೆರಾ ಹಾಗೂ ಪತ್ರಕರ್ತ ಸಂಜಯ್ ಜೇನಾ ಅವರನ್ನು ಕಂಬಿ ಎಣಿಸುವಂತೆ ಮಾಡಿದೆ.





Leave a comment