SUDDIKSHANA KANNADA NEWS/ DAVANAGERE/ DATE:18_07_2025
ದಾವಣಗೆರೆ: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ, ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
READ ALSO THIS STORY: ಐಎಎಸ್, ಕೆಎಎಸ್, ಬ್ಯಾಂಕಿಂಗ್, ಪಿಎಸ್ಐ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗೆ ದಾವಣಗೆರೆಯಲ್ಲೇ ಕೋಚಿಂಗ್: ಡಾ. ಪ್ರಭಾ ಮಲ್ಲಿಕಾರ್ಜುನ್
ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದ ಮಹಾಸಭಾದ ಕಾರ್ಯಕರ್ತರು, ಸಮಾಜ ಬಾಂಧವರು ಅಲೆಮಾರಿ ಸಮುದಾಯದವರ ಮೇಲೆ ಪಲ್ಲವಿ ಅವರು ನೀಡಿರುವ ದೂರನ್ನು ಹಿಂಪಡೆದು ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಜು.5ರಂದು ಮಾಜಿ ಸಚಿವ ಹೆಚ್. ಆಂಜನೇಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿಗಳ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಗೆ ಆಹ್ವಾನ ಇಲ್ಲದಿದ್ದರೂ ಆಗಮಿಸಿದ್ದ ಪಲ್ಲವಿ ಅವರು ವಿನಾಕಾರಣ ಗೊಂದಲ ಉಂಟುಮಾಡಿ, ಮಾಜಿ ಸಚಿವ ಹೆಚ್. ಆಂಜನೇಯ ಅವರಿಗೆ ಮತ್ತು ನಮ್ಮ ಸಮುದಾಯದ ಮುಖಂಡರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಪಲ್ಲವಿ ಅವರ ಜತೆಗೆ ಸೇರಿ ಆನಂದ್ ಕುಮಾರ್ ಏಕಲವ್ಯ ಅವರು ಕೂಡ ಸರ್ಕಾರಿ ನೌಕರರೆನ್ನುವುದ ಮರೆತು ಗೂಂಡಾವರ್ತನೆ ತೋರಿದ್ದಾರೆ ಎಂದು ಆಪಾದಿಸಿದರು.
ಅಲೆಮಾರಿ ಜನಾಂಗದ 7ಜನ ಮುಖಂಡರ ಮೇಲೆ ಮೂರು ಸುಳ್ಳು ದೂರು ದಾಖಲಿಸಿದ್ದಾರೆ. ಕೂಡಲೇ ಈ ದೂರುಗಳನ್ನು ಅವರು ಹಿಂಪಡೆಯಬೇಕು. ಸಿಎಂ ಸಿದ್ಧರಾಮಯ್ಯ ಅವರು ಪಲ್ಲವಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕ, ಆನಂದ್ ಏಕಲವ್ಯ ಅವರನ್ನೂ ಕೂಡ ಮಾತೃ ಇಲಾಖೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ವಿ. ಸಣ್ಣಅಜ್ಜಯ್ಯ, ಶಿವಣ್ಣ, ಎನ್.ಡಿ. ಮಂಜಪ್ಪ, ಎಸ್.ಕೆ. ವೀರೇಶ್ ಕುಮಾರ್, ಚಿನ್ನರೆಡ್ಡಿ, ಸಿದ್ದಪ್ಪ, ಪರಮೇಶ್, ದುಗ್ಗೇಶ್, ಮೈಲಾರಿ, ಆನಂದ್ ಇತರರು ಇದ್ದರು.