SUDDIKSHANA KANNADA NEWS/ DAVANAGERE/ DATE:01-03-2025
ದಾವಣಗೆರೆ: ನಗರದ ಅರುಣಾ ಚಿತ್ರಮಂದಿರದ ಹತ್ತಿರ ಹೊಸದಾಗಿ ಪ್ರಾರಂಭೋತ್ಸವ ಮಾಡಿರುವ ದಿ ಚೆನ್ನಯ್ಯ ಶಾಪಿಂಗ್ ಮಾಲ್ ನಲ್ಲಿ ಕನ್ನಡ ನಾಮಫಲಕ ಅಳವಡಿಸದಿರುವುದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ. ಜಿ. ಯಲ್ಲಪ್ಪ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿದ ಪದಾಧಿಕಾರಿಗಳು ದಿ ಚೆನ್ನಯ್ಯ ಮಾಲ್ ನಲ್ಲಿ ಇಂಗ್ಲೀಷ್ ನಾಮಫಲಕಗಳನ್ನು ದೊಡ್ಡದಾಗಿ ಅಳವಡಿಸಲಾಗಿದೆ. ಕನ್ನಡ ಭಾಷೆಯ ನಾಮಫಲಕಗಳು ಕಾಣದಂತೆ ಹಾಕಲಾಗಿದೆ. ಇದು ಕನ್ನಡ ವಿರೋಧಿ ಧೋರಣೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ರಾಜ್ಯ ಸರ್ಕಾರವು ಸಹ ಕನ್ನಡ ಭಾಷೆಯ ನಾಮಫಲಕಗಳು ಕಾಣುವಂತೆ ಹಾಗೂ ದೊಡ್ಡದಾಗಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದರೂ ಕನ್ನಡ ವಿರೋಧಿ ಧೋರಣೆ ತಾಳಿರುವುದು ನಿಜಕ್ಕೂ ಖಂಡನೀಯ. ಆಂಧ್ರ ಪ್ರದೇಶದವರು ಮಾಲೀಕರು ಅಂತೀರಾ. ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕು ಎಂಬುದು ಗೊತ್ತಿಲ್ಲವಾ? ಕರ್ನಾಟಕದಲ್ಲಿ
ಕನ್ನಡವೇ ಸಾರ್ವಭೌಮ. ಇಂಥ ಕನ್ನಡ ವಿರೋಧಿ ಮನಸ್ಥಿತಿ ಅನುಸರಿಸಿದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಜಿ. ಯಲ್ಲಪ್ಪ ಅವರು, ಶೇಕಡಾ 60ರಷ್ಟು ಕನ್ನಡ ಭಾಷೆಯ ಪದಗಳು ನಾಮಫಲಕಗಳು ಇರಬೇಕು. ಆದ್ರೆ, ಶಾಪ್ ಮೇಲೆ ಅಳವಡಿಸಲಾಗಿರುವ ಫ್ಲೆಕ್ಸ್ ನಲ್ಲಿ ಕನ್ನಡ ಅಕ್ಷರಗಳೇ ಕಾಣುತ್ತಿಲ್ಲ. ಆ ಕಡೆ ಈ ಕಡೆ ಕನ್ನಡ ಅಲ್ಲ, ಮುಖ್ಯದ್ವಾರದ ಮೇಲೆ ಅಳವಡಿಸಿರುವ ನಾಮಫಲಕದಲ್ಲಿ ಇರಬೇಕು. ಮೊದಲು ಅದನ್ನು ತೆಗೆಸಬೇಕು. ನಾವೇನೂ ಜಗಳ ಮಾಡಲು ಬಂದಿಲ್ಲ. ಕನ್ನಡ ವಿರೋಧಿ ಧೋರಣೆ ನೀತಿ ಅನುಸರಿಸಿದರೆ ನಾವು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು,
ಪುಟ್ ಪಾತ್ ಮೇಲೆ ಶಾಪಿಂಗ್ ಮಾಲ್ ನವರು ಕಟ್ಟಿದ್ದಾರೆ. ಒಬ್ಬ ಬಡ ವ್ಯಾಪಾರಿ ಪುಟ್ ಪಾತ್ ಮೇಲೆ ತಿಂಡಿ ಅಂಗಡಿ ಇಲ್ಲವೇ ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡರೆ ಕಾರ್ಪೊರೇಷನ್ ಅಧಿಕಾರಿಗಳು ಬಂದು ತೆರವುಗೊಳಿಸುತ್ತಾರೆ. ಇದು ದೊಡ್ಡ ಮಾಲ್ ಎಂಬ ಕಾರಣಕ್ಕೆ ಸುಮ್ಮನಿದ್ದಾರಾ ಎಂದು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಶಾಪ್ ನವರು ಕನ್ನಡಪರ ಸಂಘಟನೆಗಳು ಹೇಳಿದ್ದನ್ನು ಸರಿಪಡಿಸುತ್ತೇವೆ. ಕನ್ನಡ ಭಾಷೆಯಲ್ಲಿ ನಾಮಫಲಕ ಇಲ್ಲ ಎಂದು ಹೇಳುತ್ತಿದ್ದಾರೆ. ಕೂಡಲೇ ಆಗಿರುವ ಪ್ರಮಾದ ಸರಿಪಡಿಸಿಕೊಂಡು ಕನ್ನಡ ಭಾಷೆಗೆ ಮಾನ್ಯತೆ ನೀಡುತ್ತೇವೆ. ಕನ್ನಡ ಭಾಷೆ ಕಾಣುವಂತೆ ದೊಡ್ಡದಾಗಿ ಅಳವಡಿಸುತ್ತೇವೆ. ಇನ್ನೆರಡು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇನ್ನೆರಡು ದಿನಗಳವರೆಗೆ ಕಾದು ನೋಡುತ್ತೇವೆ. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಯಲ್ಲಪ್ಪ ಅವರು ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಬಾಬುರಾವ್, ರಮೇಶ್, ಗಿರೀಶ್, ರಂಗನಾಥ್ ಮತ್ತಿತರರು ಹಾಜರಿದ್ದರು.