ಕಾಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಸರಣಿ ಭೂಕುಸಿತದ ನಂತರ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿಕೊಂಡಿರುವ ನೂರಾರು ಕಾರ್ಮಿಕರ ರಕ್ಷಣೆಗಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ರಕ್ಷಣಾ ಕಾರ್ಯಾಚರಣೆಯ ಕುರಿತು ಸರ್ಕಾರ ನೀಡುತ್ತಿರುವ ಪ್ರಕಟಣೆಗಳು ಮತ್ತು ಸ್ಥಳೀಯ ವಾಸ್ತವ ಸ್ಥಿತಿಗೆ ಅಂತರವಿದ್ದು, ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಸಂತ್ರಸ್ತರ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.
ರಸುವಾ ಜಿಲ್ಲೆಯ ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ನೇಪಾಳ ವಿದ್ಯುತ್ ಪ್ರಾಧಿಕಾರದ 40ಕ್ಕೂ ಹೆಚ್ಚು ಸಿಬ್ಬಂದಿ ಕಳೆದ ಆರನೇ ದಿನವೂ ಸಿಲುಕಿಕೊಂಡಿದ್ದಾರೆ. ನಾಪತ್ತೆಯಾಗಿರುವ ಇಂಜಿನಿಯರ್ ಅವರ ಪತ್ನಿಯೊಬ್ಬರು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದು, ಸರ್ಕಾರದ ಬೇಜವಾಬ್ದಾರಿತನವನ್ನು ತೀವ್ರವಾಗಿ ತೊಳೆಯುವ ಯತ್ನ ಮಾಡಿದ್ದಾರೆ.
“ಕನಿಷ್ಠ ಒಂದು ಜೆಸಿಬಿ ಅಥವಾ ಟನೆಲ್ ಕಟರ್ ಸಹ ಬಂದಿಲ್ಲ”
“ಸುರಂಗದೊಳಗೆ ಭಾರತ ಮತ್ತು ಚೀನಾ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ನಿಜವಾದ ಸ್ಥಿತಿ ಎಂದರೆ ಸ್ಥಳಕ್ಕೆ ಕನಿಷ್ಠ ಒಂದು ಜೆಸಿಬಿ (JCB) ಅಥವಾ ಟನೆಲ್ ಕಟರ್ (Tunnel Cutter) ಕೂಡ ತಲುಪಿಲ್ಲ. ನಾವು ಪ್ರತಿ ಗಂಟೆಯೂ ಜೀವ ಕೈಯಲ್ಲಿಡಿದು ಕಾಯುತ್ತಿದ್ದೇವೆ. ನಮ್ಮ ಗಂಡಂದಿರು ದೇಶದ ಕೆಲಸಕ್ಕಾಗಿ ತೆರಳಿದ್ದರೇ ಹೊರತು ಸ್ವಂತ ಕೆಲಸಕ್ಕಲ್ಲ. ಅವರ ಜೀವ ಉಳಿಸಲು ನಾವು ಮಾಧ್ಯಮಗಳ ಮುಂದೆ ಭಿಕ್ಷೆ ಬೇಡಬೇಕೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಸುಮಾರು 1,000ಕ್ಕೂ ಹೆಚ್ಚು ಜಲವಿದ್ಯುತ್ ಸಿಬ್ಬಂದಿ ನಾಪತ್ತೆ
ನೇಪಾಳಾದ್ಯಂತ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 1,093ಕ್ಕೆ ಏರಿಕೆಯಾಗಿದ್ದು, ಸುಮಾರು 4,000 ಜನರು ಕಾಣೆಯಾಗಿದ್ದಾರೆ. ಮೇಲ್ಭಾಗದ ತ್ರಿಶೂಲಿ-1 ಯೋಜನೆಯಿಂದ 550ಕ್ಕೂ ಹೆಚ್ಚು ಕಾರ್ಮಿಕರು, ತ್ರಿಶೂಲಿ-3ಬಿ, ಚಿಲಿಮೆ ಹಾಗೂ ಲ್ಯಾಂಗ್ಟಾಂಗ್ ಜಲವಿದ್ಯುತ್ ಯೋಜನೆಗಳಿಂದ ನೂರಾರು ಉದ್ಯೋಗಿಗಳು ನಾಪತ್ತೆಯಾಗಿದ್ದಾರೆ. ಸೇನೆ ಮತ್ತು ಅಂತಾರಾಷ್ಟ್ರೀಯ ತಂಡಗಳ ನೆರವಿನೊಂದಿಗೆ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಆಡಳಿತ ತಿಳಿಸಿದೆಯಾದರೂ, ಸ್ಥಳೀಯ ಮೂಲಗಳ ಪ್ರಕಾರ ರಕ್ಷಣಾ ವೇಗ ತೀವ್ರ ನಿಧಾನವಾಗಿದೆ.





Leave a comment