SUDDIKSHANA KANNADA NEWS/ DAVANAGERE/ DATE-08-05-2025
ದಾವಣಗೆರೆ: ಎಸ್ ಕೆ ಎ ಹೆಚ್ ಮಿಲ್ಲತ್ ಕಾಂಪೋಸಿಟ್ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಹತ್ತನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಸ್.ಕೆ.ಎ.ಎಚ್ ಮಿಲ್ಲತ್ ಸಂಯೋಜಿತ ಪಿಯು ಕಾಲೇಜಿನ (ಪ್ರೌಢಶಾಲಾ ವಿಭಾಗ) ಹತ್ತನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಸಮ್ರೀನ್ ಶೇ. 91, ಮಸ್ಕನ್ ಶೇ.89, ಯಾಸ್ಮೀನ್ ಶೇ. 85, ಉಮ್ಮೆ ಕುಲ್ಸುಮ್ ಶೇ. 85ರಷ್ಟು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿಗಳ ಜೊತೆ ಪೋಷಕರನ್ನು ಮಿಲ್ಲತ್ ಸಮೂಹ ಸಂಸ್ಥೆಗಳ ಪರವಾಗಿ ಜಂಟಿ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ಪರೀಕ್ಷೆ ತುಂಬಾನೇ ಮಹತ್ವದ್ದು. ಈ ಪರೀಕ್ಷೆಯಲ್ಲಿ ಶೇಕಡಾ 85ಕ್ಕೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗಿದೆ. ಭವಿಷ್ಯ ಉಜ್ವಲವಾಗಿರಲಿ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಬೇಸರಪಟ್ಟುಕೊಳ್ಳಬಾರದು. ಮುಂದೆ ಚೆನ್ನಾಗಿ ಓದಿ. ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಹುದ್ದೆಗೆ ಹೋಗುವಂತಾಗಲಿ ಎಂದು ಹಾರೈಸಿದರು.
ಮಕ್ಕಳ ಜೊತೆಗೆ ಪೋಷಕರನ್ನು ಸನ್ಮಾನಿಸಲಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಎಷ್ಟೇ ಕಷ್ಟವಿದ್ದರೂ ಪೋಷಕರು ಸಹಾಯ ಮಾಡಿದ್ದಾರೆ. ಮಕ್ಕಳಿಗೆ ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ಬಡತನ, ಆರ್ಥಿಕ ಸಂಕಷ್ಟ ಇದ್ದರೂ ಎದೆಗುಂದದೇ ಉತ್ತಮ ಶಿಕ್ಷಣ ಕೊಡಿಸಿ. ಮುಂದೆ ಚೆನ್ನಾಗಿ ಓದಿ ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಒಳ್ಳೆಯ ಹೆಸರು ತರುವಂತರಾಗಲಿ ಎಂದು ಸೈಯದ್ ಖಾಲಿದ್ ಅಹಮ್ಮದ್ ಹೇಳಿದರು.
ಈ ವೇಳೆ ಮಿಲ್ಲತ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಜಾಕಿರ್ ಹುಸೇನ್, ಖುಷ್ಟರಿ ಬೇಗಂ ಸೇರಿದಂತೆ ಇತರರು ಹಾಜರಿದ್ದರು.