SUDDIKSHANA KANNADA NEWS/ DAVANAGERE/ DATE-05-06-2025
ದಾವಣಗೆರೆ: ಹರಪನಹಳ್ಳಿ ತಾಲೂಕಿನ ಟಿ. ತುಂಬಿಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ರಾಜಗೋಪುರದ ಕಳಸಾರೋಹಣ, ಶ್ರೀ ಮೈಲಾರಲಿಂಗೇಶ್ವರ ಶಿಬಾರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಪಾಲ್ಗೊಂಡರು.
ಟಿ. ತುಂಬಿಗೆರೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು. ಜಿ. ಬಿ. ವಿನಯ್ ಕುಮಾರ್ ಅವರು ಶ್ರೀ ಆಂಜನೇಯ ಸ್ವಾಮಿ, ಶ್ರೀ ಮೈಲಾರಲಿಂಗೇಶ್ವರ ದೇವರ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಜಿ. ಬಿ. ವಿನಯ್ ಕುಮಾರ್ ಅವರು, ಈ ಬಾರಿ ಮುಂಗಾರು ಮುಂಚೆ ಮಳೆ ಆರಂಭವಾಗಿದೆ. ಇನ್ನು ಮುಂಗಾರು ಪ್ರವೇಶ ಮಾಡಬೇಕಿದೆ. ಶ್ರೀ ಆಂಜನೇಯ ಸ್ವಾಮಿ, ಶ್ರೀ ಮೈಲಾರಲಿಂಗೇಶ್ವರ ದೇವರು ನಾಡಿನ ಎಲ್ಲರಿಗೂ ಒಳಿತು ಮಾಡಲಿ. ರೈತರ ಬದುಕು ಹಸನಾಗಲಿ. ಒಳ್ಳೆಯ ಮಳೆ, ಬೆಳೆ ಆಗಲಿ. ಜನರು ಸಮೃದ್ಧಿಯಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿದರು.
ಹರಪನಹಳ್ಳಿ ತಾಲೂಕಿನ ಜನರು ತೋರಿರುವ ಪ್ರೀತಿ ಅಪಾರ. ನಾನು ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಜನರು ಕೊಟ್ಟ ಬೆಂಬಲ ಮರೆಯಲು ಸಾಧ್ಯವಾಗದು. ಟಿ. ತುಂಬಿಗೆರೆ ಗ್ರಾಮಸ್ಥರ ಪ್ರೀತಿಯ ಆಹ್ವಾನದ ಮೇರೆಗೆ ಬಂದಿದ್ದೇನೆ. ಇಲ್ಲಿಗೆ ಬಂದಿದ್ದು ತುಂಬಾನೇ ಖುಷಿ ಕೊಟ್ಟಿದೆ. ಗ್ರಾಮಸ್ಥರು ತೋರಿದ ಪ್ರೀತಿಗೆ ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದು ವಿನಯ್ ಕುಮಾರ್ ಅವರು ಹೇಳಿದರು.
ಅದ್ಧೂರಿ ಸ್ವಾಗತ:
ಜಿ. ಬಿ. ವಿನಯ್ ಕುಮಾರ್ ಟಿ. ತುಂಬಗೆರೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಈ ವೇಳೆ ವಿನಯ್ ಕುಮಾರ್ ಅವರನ್ನು ಭುಜದ ಮೇಲೆ ಹೊತ್ತು ಗ್ರಾಮಸ್ಥರು ನಡೆದಿದ್ದು ವಿಶೇಷವಾಗಿತ್ತು.
ಪ್ರಾತಃಕಾಲದಲ್ಲಿ ಏಕಾದಶಿ ಮಹಾರುದ್ರಾಭಿಷೇಕ, ಹೋಮ, ವಿಶೇಷ ಅಲಂಕಾರ ಪೂಜೆ ನೆರವೇರಿತು. ಗ್ರಾಮದ ರಾಜಬೀದಿಗಳಲ್ಲಿ ಪೂರ್ಣಕುಂಭ ಮೇಳದೊಂದಿಗೆ ಸಕಲ ವಾದ್ಯವೃಂದ, ಕಲಾಮೇಳಗಳಿಂದ ಹಾಗೂ ವಿವಿಧ ಗ್ರಾಮಗಳ
ಸಮಾಳ, ನಂದಿಕೋಲು ಕಲಾ ಸಂಘದ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಬರಮಾಡಿಕೊಳ್ಳಲಾಯಿತು. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ರಾಜಗೋಪುರದ ಕಳಸಾರೋಹಣ, ಮೈಲಾರಲಿಂಗೇಶ್ವರ ಶಿಬಾರ ಪ್ರತಿಷ್ಠಾಪನೆಯೂ ನೆರವೇರಿತು. ಜನಜಾಗೃತಿ, ಧರ್ಮಸಭೆಯೂ ಜರುಗಿತು.